'ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ, ನಾವು ಕರ್ತವ್ಯಕ್ಕೆ ಮರಳುವುದಿಲ್ಲ': ಕೋಲ್ಕತ್ತಾ ಕಿರಿಯ ವೈದ್ಯರ ಪಟ್ಟು ಕೋಲ್ಕತ್ತಾದ ಆರ್‌ಜಿ ಕಾರ್ ಆಸ್ಪತ್ರೆಯ ಕೆಲವು ಪ್ರತಿಭಟನಾನಿರತ ಕಿರಿಯ ವೈದ್ಯರೊಂದಿಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಿಬ್ಬಂದಿ ಮಾತನಾಡಿಸಿದಾಗ, ನಮ್ಮ ಆವರಣದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಇದ್ದರೂ ನಮ್ಮ ಜೀವಕ್ಕೆ ಸುರಕ್ಷತೆಯಿಲ್ಲ ಎಂದಿದ್ದಾರೆ. ಕೋಲ್ಕತ್ತಾ: ಇಂದು ಮಂಗಳವಾರ ಸಂಜೆ 5 ಗಂಟೆಯೊಳಗೆ ಧರಣಿ ನಿರತ ಕಿರಿಯ ವೈದ್ಯರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ವೈದ್ಯರು ಕಳೆದ ತಿಂಗಳು ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿರುವ ತಮ್ಮ ಸಹಪಾಠಿ ಮತ್ತು ಸಹೋದ್ಯೋಗಿಯ ಸಾವಿಗೆ ನ್ಯಾಯ ಸಿಗುವವರೆಗೆ ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.ಕೋಲ್ಕತ್ತಾದ ಆರ್‌ಜಿ ಕಾರ್ ಆಸ್ಪತ್ರೆಯ ಕೆಲವು ಪ್ರತಿಭಟನಾನಿರತ ಕಿರಿಯ ವೈದ್ಯರೊಂದಿಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಿಬ್ಬಂದಿ ಮಾತನಾಡಿಸಿದಾಗ, ನಮ್ಮ ಆವರಣದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಇದ್ದರೂ ನಮ್ಮ ಜೀವಕ್ಕೆ ಸುರಕ್ಷತೆಯಿಲ್ಲ ಎಂದಿದ್ದಾರೆ.ಕಳೆದ ತಿಂಗಳು ನಮ್ಮ ಸಹಪಾಠಿಯ ಅತ್ಯಾಚಾರ-ಕೊಲೆ ಘಟನೆಯ ನಂತರ, ಭಯದ ಭಾವನೆ ನಮ್ಮನ್ನು ಕಾಡುತ್ತಿದೆ. ಅನೇಕ ಅಪರಾಧಿಗಳು ಇನ್ನೂ ಸಲೀಸಾಗಿ ಓಡಾಡುತ್ತಿರುವುದರಿಂದ, ಅವರು ಯಾವುದೇ ಸಮಯದಲ್ಲಿ ನಮ್ಮ ಮೇಲೆ ದಾಳಿ ಮಾಡಬಹುದು ಎಂಬ ಭೀತಿ ನಮಗಿದೆ ಎಂದು ಹೆಸರು ಹೇಳಲು ಇಚ್ಛಿಸದ ವೈದ್ಯರು ಹೇಳುತ್ತಾರೆ. ಮತ್ತೊಬ್ಬ ಕಿರಿಯ ವೈದ್ಯರು, ನಾವು ಸುರಕ್ಷಿತವಾಗಿಲ್ಲ. ನಮಗೆ ಭದ್ರತೆ ಸಿಗದ ಹೊರತು ನಾವು ಕೆಲಸಕ್ಕೆ ಬರಲು ಸಾಧ್ಯವೇ ಇಲ್ಲ. ನಮ್ಮ ಬೇಡಿಕೆ ಈಡೇರುವ ತನಕ ಮತ್ತು ನಮ್ಮ ಸಹಪಾಠಿಯ ಸಾವಿಗೆ ನ್ಯಾಯ ಸಿಗುವವರೆಗೆ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ ಎಂದರು.ಸುಪ್ರೀಂ ಕೋರ್ಟ್ ಆದೇಶದ ನಂತರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಿನ್ನೆ ಪತ್ರಿಕಾಗೋಷ್ಠಿಯನ್ನು ಕರೆದು ಕಿರಿಯ ವೈದ್ಯರು ತಮ್ಮ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿಕೊಂಡರು.ಸುಪ್ರೀಂ ಕೋರ್ಟ್‌ನಲ್ಲಿ, ರಾಜ್ಯ ಸರ್ಕಾರದ ವಕೀಲರು ಕಿರಿಯ ವೈದ್ಯರು ಪ್ರತಿಭಟನೆಯನ್ನು ಪ್ರಾರಂಭಿಸಿದ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ ಒಂದು ತಿಂಗಳಲ್ಲಿ 23 ಜನರು ಮೃತಪಟ್ಟಿದ್ದಾರೆ ಎಂದು ವರದಿ ನೀಡಿದರು.ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್, ವಿದ್ಯಾರ್ಥಿಗಳ ಬೇಡಿಕೆಗಳನ್ನು ಪೂರೈಸಲು ನಾವು ಭದ್ರತೆಯನ್ನು ಒದಗಿಸಲು ಬದ್ಧರಾಗಿದ್ದೇವೆ. ಈಗಾಗಲೇ ವಿವಿಧ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ವಿಶ್ರಾಂತಿ ಕೊಠಡಿಗಳು ಮತ್ತು ಶೌಚಾಲಯಗಳ ನವೀಕರಣ ಸೇರಿದಂತೆ ಭದ್ರತಾ ಮೂಲಸೌಕರ್ಯಗಳನ್ನು ನವೀಕರಿಸಲು 100 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ, ಕಿರಿಯ ವೈದ್ಯರು ಕರ್ತವ್ಯಕ್ಕೆ ಹಾಜರಾಗಿ ಎಂದು ಕೇಳಿಕೊಂಡರು.ಆದರೆ ರಾಜ್ಯ ಸರ್ಕಾರ ನಮ್ಮ ಪ್ರತಿಭಟನೆಯನ್ನು ತಡೆಯಲು ನೋಡುತ್ತಿದೆಯೇ ಹೊರತು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಕಿರಿಯ ವೈದ್ಯರು ಆರೋಪಿಸುತ್ತಿದ್ದಾರೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತು ನಾವು ಕರ್ತವ್ಯಕ್ಕೆ ಮರಳುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.