ನಿತ್ಯಾನಂದನ ಕಾಲ್ಪನಿಕ ದೇಶ ಕೈಲಾಸದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದ್ದ ಪೆರಗ್ವೆ ಅಧಿಕಾರಿ ವಜಾ ಭಾರತದಿಂದ ಪರಾರಿಯಾಗಿರುವ ನಿತ್ಯಾನಂದನ ಕಾಲ್ಪನಿಕ ದೇಶ ಕೈಲಾಸದ ಪ್ರತಿನಿಧಿಗಳೊಂದಿಗೆ 'ಸಹಕಾರ ಒಡಂಬಡಿಕೆ'ಗೆ ಸಹಿ ಹಾಕಿದ್ದ ಪೆರಗ್ವೆ ಸರ್ಕಾರಿ ಅಧಿಕಾರಿಯನ್ನು ವಜಾಗೊಳಿಸಲಾಗಿದೆ. ಬ್ಯೂನಸ್ ಐರಿಸ್: ಭಾರತದಿಂದ ಪರಾರಿಯಾಗಿರುವ ನಿತ್ಯಾನಂದನ ಕಾಲ್ಪನಿಕ ದೇಶ ಕೈಲಾಸದ ಪ್ರತಿನಿಧಿಗಳೊಂದಿಗೆ 'ಸಹಕಾರ ಒಡಂಬಡಿಕೆ'ಗೆ ಸಹಿ ಹಾಕಿದ್ದ ಪೆರಗ್ವೆ ಸರ್ಕಾರಿ ಅಧಿಕಾರಿಯನ್ನು ವಜಾಗೊಳಿಸಲಾಗಿದೆ.ಅಸ್ತಿತ್ವದಲ್ಲೇ ಇರದ ನಿತ್ಯಾನಂದನ ದೇಶದ ಜತೆ ಒಡಂಬಡಿಕೆಗೆ ಸಹಿ ಹಾಕಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೆರಗ್ವೆಯಲ್ಲಿ ದೊಡ್ಡ ಹಗರಣವನ್ನು ಹುಟ್ಟುಹಾಕಿತ್ತು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರ ಅಪಹಾಸ್ಯಕ್ಕೆ ಗುರಿಯಾಗಿತ್ತು.ಇದನ್ನು ಓದಿ: ನಿತ್ಯಾನಂದನ ಕೈಲಾಸ ದೇಶಕ್ಕೆ 'ಸ್ವಾಮಿ' ರಂಜಿತಾ ಪ್ರಧಾನಿ!ಆದರೆ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸಾದ ಪ್ರತಿನಿಧಿಗಳು ಅಂತರರಾಷ್ಟ್ರೀಯ ನಾಯಕರನ್ನು ವಂಚಿಸಿದ್ದು ಇದೇ ಮೊದಲು ಅಲ್ಲ. ಈ ವರ್ಷದ ಆರಂಭದಲ್ಲಿ, ಅವರು ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಸಮಿತಿ ಸಭೆಯಲ್ಲಿ ಭಾಗವಹಿಸಲು ಯಶಸ್ವಿಯಾಗಿದ್ದರು ಮತ್ತು ಯುನೈಟೆಡ್ ಸ್ಟೇಟ್ಸ್ ಹಾಗೂ ಕೆನಡಾದಲ್ಲಿ ಸ್ಥಳೀಯ ನಾಯಕರೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದ್ದರು.ನಿತ್ಯಾನಂದನ ಪ್ರತಿನಿಧಿಗಳು ತಾವು ದಕ್ಷಿಣ ಅಮೆರಿಕದ ದ್ವೀಪವಾದ 'ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ'ದಿಂದ ಬಂದವರು ಎಂದು ಹೇಳಿಕೊಂಡು ಪೆರಗ್ವೆ ಕೃಷಿ ಸಚಿವರ ಸಿಬ್ಬಂದಿ ಮುಖ್ಯಸ್ಥ ಅರ್ನಾಲ್ಡೋ ಚಾಮೊರೊ ಅವರೊಂದಿಗೆ ಒಡಂಬಡಿಕಿಗೆ ಸಹಿ ಹಾಕಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅರ್ನಾಲ್ಡೋ ಚಾಮೊರೊ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ."ಅವರು(ಕೈಲಾಸ ದೇಶದ ಅಧಿಕಾರಿಗಳು) ನಮ್ಮಲ್ಲಿಗೆ ಬಂದು, ಪೆರಗ್ವೆಗೆ ಸಹಾಯ ಮಾಡುವ ಬಯಕೆ ವ್ಯಕ್ತಪಡಿಸಿದ್ದರು. ಅವರು ಅನೇಕ ಯೋಜನೆಗಳನ್ನು ಪ್ರಸ್ತುತಪಡಿಸಿದ್ದರು. ನಾವು ಅವರ ಮಾತನ್ನು ಸಂಪೂರ್ಣವಾಗಿ ಆಲಿಸಿದ್ದೆವು ಮತ್ತು ಅವುಗಳನ್ನು ಒಪ್ಪಿಕೊಂಡಿದ್ದೆವು" ಎಂದು ನಿತ್ಯಾನಂದನ ಪ್ರತಿನಿಧಿಗಳನ್ನು ನಂಬಿ ಕೆಲಸ ಕಳೆದುಕೊಂಡ ಅರ್ನಾಲ್ಡೊ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.