ಇಸ್ರೇಲ್, ಇರಾನ್ ಗೆ ಪ್ರಯಾಣಿಸದಂತೆ ಭಾರತೀಯರಿಗೆ ಸಲಹೆ 11 ದಿನಗಳ ಹಿಂದೆ ಸಿರಿಯಾದಲ್ಲಿರುವ ಇರಾನ್ ಕಾನ್ಸುಲೇಟ್‌ ಮೇಲಿನ ದಾಳಿ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಇರಾನ್ ಅಥವಾ ಇಸ್ರೇಲ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಸಲಹೆ ನೀಡಿದೆ. ನವದೆಹಲಿ: 11 ದಿನಗಳ ಹಿಂದೆ ಸಿರಿಯಾದಲ್ಲಿರುವ ಇರಾನ್ ಕಾನ್ಸುಲೇಟ್‌ ಮೇಲಿನ ದಾಳಿ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಇರಾನ್ ಅಥವಾ ಇಸ್ರೇಲ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಸಲಹೆ ನೀಡಿದೆ.ಕಾನ್ಸುಲೇಟ್‌ ಮೇಲಿನ ದಾಳಿಗೆ ಇಸ್ರೇಲ್ ನ್ನು ಇರಾನ್ ದೂಷಿಸಿದ್ದು, ಉಭಯ ದೇಶಗಳ ನಡುವೆ ಶೀಘ್ರದಲ್ಲಿಯೇ ಯುದ್ಧ ಆರಂಭವಾಗುವ ಸಾಧ್ಯತೆಯಿದೆ. ಇರಾನ್ ಹಾಗೂ ಇಸ್ರೇಲ್ ನಲ್ಲಿರುವ ಭಾರತೀಯರು ತಮ್ಮ ಸುರಕ್ಷತೆಯ ಖಾತ್ರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅನಗತ್ಯವಾಗಿ ಹೊರಗೆ ತಿರುಗಾಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.ಪ್ರಸ್ತುತ ಅಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಸೂಚನೆ ಬರುವವರೆಗೂ ಇರಾನ್ ಅಥವಾ ಇಸ್ರೇಲ್‌ಗೆ ಪ್ರಯಾಣಿಸದಂತೆ ಎಲ್ಲಾ ಭಾರತೀಯರಿಗೆ ಸೂಚಿಸಲಾಗಿದೆ. "ಪ್ರಸ್ತುತ ಇರಾನ್ ಅಥವಾ ಇಸ್ರೇಲ್‌ನಲ್ಲಿ ನೆಲೆಸಿರುವ ಎಲ್ಲರೂ ಅಲ್ಲಿನ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಎಂಇಎ ಹೇಳಿದೆ.