ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಪ್ರತಿಭಟನೆ ನಡುವೆಯೂ ಹಂಗಾಮಿ ಅಧ್ಯಕ್ಷರಾಗಿ ರಣಿಲ್ ವಿಕ್ರಮಸಿಂಘೆ ನೇಮಕ! ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದಾಗಿ ಉಂಟಾಗಿರುವ ನಾಗರೀಕರ ಸಂಘರ್ಷ ಮುಂದುವರೆದಿರುವಂತೆಯೇ ಇತ್ತ ಪ್ರತಿಭಟನಾಕಾರರ ವಿರೋಧದ ನಡುವೆಯೂ ಹಾಲಿ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರನ್ನು ಶ್ರೀಲಂಕಾದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕೊಲಂಬೊ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದಾಗಿ ಉಂಟಾಗಿರುವ ನಾಗರೀಕರ ಸಂಘರ್ಷ ಮುಂದುವರೆದಿರುವಂತೆಯೇ ಇತ್ತ ಪ್ರತಿಭಟನಾಕಾರರ ವಿರೋಧದ ನಡುವೆಯೂ ಹಾಲಿ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರನ್ನು ಶ್ರೀಲಂಕಾದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಬುಧವಾರ ಮಿಲಿಟರಿ ಜೆಟ್‌ನಲ್ಲಿ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ ನಂತರ ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ದೇಶದ ಹಂಗಾಮಿ ಅಧ್ಯಕ್ಷರಾಗಿ ನೇಮಿಸಲಾಗಿದೆ. ಅಧ್ಯಕ್ಷ ರಾಜಪಕ್ಸೆ ಅವರು ವಿದೇಶದಲ್ಲಿರುವಾಗ ತಮ್ಮ ಕಾರ್ಯಗಳನ್ನು ನಿರ್ವಹಿಸಲು ಪ್ರಧಾನಿ ವಿಕ್ರಮಸಿಂಘೆ ಅವರನ್ನು ನೇಮಿಸಿದ್ದಾರೆ ಎಂದು ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಘೋಷಿಸಿದ್ದಾರೆ. ಅಲ್ಲದೆ ಇಂತಹ ಅಧಿಕಾರ ಇದು ಸಂವಿಧಾನದ 37(1)ನೇ ಪರಿಚ್ಛೇದದ ಅಡಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಬಿಕ್ಕಟ್ಟು: ಅಮೆರಿಕಾ ಪ್ರವೇಶಿಸಲು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆಗೆ ವೀಸಾ ನಿರಾಕರಣೆ!ಇದೇ ವೇಳೆ ಪ್ರಧಾನಿ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ಕಟ್ಟಡಕ್ಕೆ ಮುತ್ತಿಗೆ ಹಾಕಿದ್ದಾರೆ. ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡ ನಂತರವೇ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗುವುದು ಎಂದು ಪಿಎಂ ಕಚೇರಿ ಈ ಹಿಂದೆ ಸರಿಪಡಿಸಿತ್ತು. ಆದರೂ ಕರ್ಫ್ಯೂ ಜಾರಿಯಲ್ಲಿತ್ತು. ಇನ್ನು ಗಲಭೆಯಲ್ಲಿ ತೊಡಗಿರುವ ಜನರನ್ನು ಬಂಧಿಸುವಂತೆ ಪ್ರಧಾನಿ ಭದ್ರತಾ ಪಡೆಗಳಿಗೆ ಆದೇಶ ನೀಡಿದ್ದಾರೆ.ಅಧ್ಯಕ್ಷ ರಾಜಪಕ್ಸೆ (73) ಅವರು ತಮ್ಮ ಪತ್ನಿ ಮತ್ತು ಇಬ್ಬರು ಭದ್ರತಾ ಅಧಿಕಾರಿಗಳೊಂದಿಗೆ ಮಿಲಿಟರಿ ಜೆಟ್‌ನಲ್ಲಿ ದೇಶವನ್ನು ತೊರೆದರು ಎಂದು ಶ್ರೀಲಂಕಾ ವಾಯುಪಡೆಯ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.ಇದನ್ನೂ ಓದಿ: ಅಧ್ಯಕ್ಷ ಗೋಟಬಯ ಮಾಲ್ಡೀವ್ಸ್ ಗೆ ಪರಾರಿ: ಶ್ರೀಲಂಕಾದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಜಾರಿ; ತೀವ್ರಗೊಂಡ ಪ್ರತಿಭಟನೆಶನಿವಾರ, ರಾಜಪಕ್ಸೆ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ ಸಾವಿರಾರು ಪ್ರತಿಭಟನಾಕಾರರು ಅವರ ರಾಜಿನಾಮೆಗೆ ಆಗ್ರಹಿಸಿದ್ದರು. ಇದಕ್ಕೆ ಒಪ್ಪಿಗೆ ನೀಡಿದ್ದ ರಾಜಪಕ್ಸೆ ಬುಧವಾರ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಆದರೆ ಮಾರನೆಯ ದಿನವೇ ಅವರು ಮಿಲಿಟರಿ ನೆರವಿನೊಂದಿಗೆ ಕುಟುಂಬ ಸಹಿತ ಪರಾರಿಯಾಗಿದ್ದಾರೆ. ರಾಜಪಕ್ಸೆ ಪಲಾಯನದ ಸುದ್ದಿ ಹರಡುತ್ತಿದ್ದಂತೆ, ಪ್ರತಿಭಟನಾ ನಿರತ ಜನಸಮೂಹವು ಗಾಲ್ ಫೇಸ್ ಗ್ರೀನ್‌ ಬಂಗಲೆಯ ಆವರಣದಲ್ಲಿ ಜಮಾಯಿಸಿತು. ಸ್ಥಳೀಯ ಜನಪ್ರಿಯ ನುಡಿಗಟ್ಟು ಅರಗಲಾಯತ ಜಯವೇವಾ ಅಥವಾ ಸಿಂಹಳೀಯ ಭಾಷೆಯಲ್ಲಿ "ಹೋರಾಟಕ್ಕೆ ವಿಜಯ" ಮತ್ತು "ಗೋ ಹೋಮ್ ಗೋಟಾ" ಎಂದು ಘೋಷಣೆ ಕೂಗಿದರು.ಇದನ್ನೂ ಓದಿ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಗೋಟಾಬಯ ಪರಾರಿ ಹಿಂದೆ ನನ್ನ ಪಾತ್ರವಿಲ್ಲ; ಭಾರತ ಸ್ಪಷ್ಟನೆಇತ್ತ ಪ್ರತಿಭಟನಾಕಾರರ ಜಮಾವಣೆಯಾಗುತ್ತಿದ್ದಂತೆಯೇ ಪ್ರಧಾನಿ ಕಚೇರಿ ಬಳಿ ಜಮಾಯಿಸಿದ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಪ್ರತಿಭಟನಾಕಾರರು ಅಶ್ರುವಾಯುವನ್ನು ಲೆಕ್ಕಿಸದೆ ಬ್ಯಾರಿಕೇಡ್ ಅನ್ನು ಭೇದಿಸಿ ಪ್ರಧಾನಿ ಕಚೇರಿಗೆ ಮುತ್ತಿಗೆ ಹಾಕಿ ರಾಜೀನಾಮೆಗೆ ಕರೆ ನೀಡಿದರು. ಪ್ರತಿಭಟನಾಕಾರರು ರಾಜಧಾನಿಯ ಮೂರು ಮುಖ್ಯ ಕಟ್ಟಡಗಳಾದ ಅಧ್ಯಕ್ಷರ ಭವನ, ಅಧ್ಯಕ್ಷೀಯ ಕಾರ್ಯದರ್ಶಿ ಮತ್ತು ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸವಾದ ಟೆಂಪಲ್ ಟ್ರೀಸ್ ಅನ್ನು ಆಕ್ರಮಿಸಿಕೊಂಡಿದ್ದಾರೆ.22 ಮಿಲಿಯನ್ ಜನರಿರುವ ಶ್ರೀಲಂಕಾ ದೇಶವು ಅಭೂತಪೂರ್ವ ಆರ್ಥಿಕ ಪ್ರಕ್ಷುಬ್ಧತೆಯ ಹಿಡಿತದಲ್ಲಿದ್ದು, ಏಳು ದಶಕಗಳಲ್ಲೇ ಅತ್ಯಂತ ಕೆಟ್ಟದಾಗಿದೆ, ಲಕ್ಷಾಂತರ ಜನರು ಆಹಾರ, ಔಷಧ, ಇಂಧನ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಹೆಣಗಾಡುತ್ತಿದ್ದಾರೆ.