ಇಂಡೋನೇಷ್ಯಾ: ಸುಮಾತ್ರ ದ್ವೀಪದಲ್ಲಿ ಹಠಾತ್ ಪ್ರವಾಹ; 50 ಸಾವು, 27 ಮಂದಿ ನಾಪತ್ತೆ ಸುಮಾತ್ರಾ ದ್ವೀಪದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದೆ. ಬಳಿಕ ಸಂಭವಿಸಿದ ಪ್ರವಾಹದಿಂದ ರಸ್ತೆಗಳು, ಮನೆಗಳು ಜಲಾವೃತಗೊಂಡಿವೆ. ಭಾನುವಾರ 37 ಮಂದಿ ಸಾವಿಗೀಡಾಗಿದ್ದರು. ಇಂದು ಅವಶೇಷಗಳ ಅಡಿಯಿಂದ 50 ಶವಗಳನ್ನು ಹೊರತೆಗೆಯಲಾಗಿದೆ. ನಾಹ್ ದಾತಾರ್: ಪಶ್ಚಿಮ ಇಂಡೋನೇಷ್ಯಾದಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಪೋಟದಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಶೀತ ಲಾವಾ ಹರಿವಿನಿಂದ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿದೆ. 27 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ವಿಪತ್ತು ನಿರ್ವಹಣಾ ಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಶನಿವಾರ ಸಂಜೆ ಸುಮಾತ್ರಾ ದ್ವೀಪದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದೆ. ಬಳಿಕ ಸಂಭವಿಸಿದ ಪ್ರವಾಹದಿಂದ ರಸ್ತೆಗಳು, ಮನೆಗಳು ಜಲಾವೃತಗೊಂಡಿವೆ. ಭಾನುವಾರ 37 ಮಂದಿ ಸಾವಿಗೀಡಾಗಿದ್ದರು. ಇಂದು ಅವಶೇಷಗಳ ಅಡಿಯಿಂದ 50 ಶವಗಳನ್ನು ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದೆ ಎಂದು ಪಶ್ಚಿಮ ಸುಮಾತ್ರಾ ವಿಪತ್ತು ನಿರ್ವಹಣಾ ಸಂಸ್ಥೆ ಅಧಿಕಾರಿ ಇಲ್ಹಾಮ್ ವಹಾಬ್ ತಿಳಿಸಿದ್ದಾರೆ.ಭಾರಿ ಪ್ರವಾಹ ಹಿನ್ನೆಲೆ 3 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹದ ನಂತರ ಕಾರ್ಮಿಕರು ಹಾನಿಗೊಳಗಾದ ಕಟ್ಟಡಗಳನ್ನು ಸ್ವಚ್ಛಗೊಳಿಸಿದರು, ರಕ್ಷಣಾ ತಂಡಕ್ಕೆ ಸಹಾಯ ಮಾಡಲು ಥರ್ಮಲ್ ಡ್ರೋನ್ ನಿಯೋಜಿಸಿದ್ದಾರೆ. ಅವಶೇಷಗಳಡಿ ಬದುಕುಳಿದವರನ್ನು ಹುಡುಕಲು ಪ್ರಯತ್ನಿಸಲಾಗುತ್ತಿದೆ. ನಾಪತ್ತೆಯಾಗಿರುವ ಡಜನ್‌ಗಟ್ಟಲೆ ಜನರಿಗಾಗಿ ಹುಡುಕಾಟ ಮುಂದುವರಿದಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.