ಹಣದುಬ್ಬರ ತಗ್ಗಿಸಲು, ಹಣಕಾಸು ಸ್ಥಿರತೆ ಕಾಪಾಡಲು ತಕ್ಷಣ ಕ್ರಮ ಕೈಗೊಳ್ಳಿ: ನೀತಿ ನಿರೂಪಕರಿಗೆ ಐಎಂಎಫ್ ಒತ್ತಾಯ ವಿಶ್ವಾದ್ಯಂತ ಯೋಜನೆಗಳನ್ನು ರೂಪಿಸುವವರು ಹಣದುಬ್ಬರವನ್ನು ತಗ್ಗಿಸಲು ಕ್ರಮ ಕೈಗೊಳ್ಳಬೇಕು, ಜವಾಬ್ದಾರಿಯುತ ಹಣಕಾಸು ಯೋಜನೆಯನ್ನು ಸರಿದಾರಿಯಲ್ಲಿ ತರಬೇಕು, ಹಣಕಾಸು ಸ್ಥಿರತೆಯನ್ನು ರಕ್ಷಿಸಬೇಕು ಮತ್ತು ಅಸಮಾನತೆಯನ್ನು ಹೋಗಲಾಡಿಸಬೇಕೆಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಒತ್ತಾಯಿಸಿದೆ. ವಾಷಿಂಗ್ಟನ್: ವಿಶ್ವಾದ್ಯಂತ ಯೋಜನೆಗಳನ್ನು ರೂಪಿಸುವವರು ಹಣದುಬ್ಬರವನ್ನು ತಗ್ಗಿಸಲು ಕ್ರಮ ಕೈಗೊಳ್ಳಬೇಕು, ಜವಾಬ್ದಾರಿಯುತ ಹಣಕಾಸು ಯೋಜನೆಯನ್ನು ಸರಿದಾರಿಯಲ್ಲಿ ತರಬೇಕು, ಹಣಕಾಸು ಸ್ಥಿರತೆಯನ್ನು ರಕ್ಷಿಸಬೇಕು ಮತ್ತು ಹವಾಮಾನ ಬದಲಾವಣೆಗೆ ಸುಧಾರಣೆಗಳನ್ನು ತರಬೇಕು, ಜನರು ಹೆಚ್ಚೆಚ್ಚು ಡಿಜಿಟಲೀಕರಣದತ್ತ ಹೊರಳಬೇಕು, ಅಸಮಾನತೆಯನ್ನು ಹೋಗಲಾಡಿಸಬೇಕೆಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಒತ್ತಾಯಿಸಿದೆ.ನಿನ್ನೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ, ಈ ಮೇಲಿನ ವಿಷಯಗಳ ಕುರಿತಂತೆ ಐಎಂಎಫ್ 190 ಸದಸ್ಯ ರಾಷ್ಟ್ರಗಳ ಜೊತೆ ಕೆಲಸ ಮಾಡುತ್ತಿದೆ. ಈ ಸಂಕೀರ್ಣ ವ್ಯವಸ್ಥೆಯನ್ನು ಪತ್ತೆಹಚ್ಚಿ ನೀತಿ ನಿರೂಪಣೆಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ಸಹಾಯ ಮಾಡಲು ನಮ್ಮ ಆರ್ಥಿಕ ವಿಶ್ಲೇಷಣೆಯು ಯಾವಗಲೂ ಮುಂಚೂಣಿಯಲ್ಲಿದ್ದು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ಕೊರೋನಾ ಸಾಂಕ್ರಾಮಿಕ, ಉಕ್ರೇನ್ ವಿರುದ್ಧ ರಷ್ಯಾ ದಾಳಿ ಮತ್ತು ಹವಾಮಾನ ವೈಪರೀತ್ಯ ಹೀಗೆ ಒಂದಿಲ್ಲೊಂದು ಸಮಸ್ಯೆಗಳಿಂದ ವಿಶ್ವದ ಆರ್ಥಿಕತೆ ಸಂಕಷ್ಟವನ್ನು ಅನುಭವಿಸಿದೆ. ಇದು ವಿಶ್ವದಲ್ಲಿ ಜನರ ಜೀವನದ ಮೇಲೆ ನೇರ ಪರಿಣಾಮ ಬೀರಿದೆ, ಜೀವನ ಮಟ್ಟ ದುಸ್ಥರವಾಗಿದೆ ಎಂದು ಹೇಳಿದರು.ಇದನ್ನೂ ಓದಿ: ಇಡೀ ಜಗತ್ತಿನ ಆರ್ಥಿಕತೆ ಕುಂಟುತ್ತಿದ್ದರೆ, ಭಾರತದ ಆರ್ಥಿಕತೆ ಮಾತ್ರ ಆಶಾಭಾವದಿಂದ ಕೂಡಿದೆ: IMFನಾವು ಮುಂದಿನ ವರ್ಷ 2023 ರಲ್ಲಿ ನಮ್ಮ ಜಾಗತಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 2.7 ಕ್ಕೆ ಕಡಿತಗೊಳಿಸಿದ್ದೇವೆ. ಆರ್ಥಿಕ ಹಿಂಜರಿತದ ಅಪಾಯಗಳು ಹೆಚ್ಚುತ್ತಿವೆ. ಬೆಳವಣಿಗೆಯು ಸಕಾರಾತ್ಮಕವಾಗಿದ್ದರೂ ಸಹ, ಅನೇಕ ಜನರಿಗೆ, ಏರುತ್ತಿರುವ ಬೆಲೆಗಳು ಮತ್ತು ನೈಜ ಆದಾಯದ ಕುಗ್ಗುವಿಕೆಯಿಂದಾಗಿ ಇದು ಆರ್ಥಿಕ ಹಿಂಜರಿತದಂತೆ ಭಾಸವಾಗುತ್ತಿದೆ ಎಂದರು. ಇದರ ಮೇಲೆ, ಹಣಕಾಸಿನ ಸ್ಥಿರತೆ ಅಪಾಯಗಳು ಬೆಳೆಯುತ್ತಿವೆ, ಅನಿಶ್ಚಿತತೆಯು ಅಸಾಧಾರಣವಾಗಿ ಹೆಚ್ಚುತ್ತಿದೆ. ನಮ್ಮ ವಿಶ್ವ ಆರ್ಥಿಕ ದೃಷ್ಟಿಕೋನವು ಮುಂದಿನ ವರ್ಷ ಜಾಗತಿಕ ಬೆಳವಣಿಗೆಯು ಐತಿಹಾಸಿಕ ಕನಿಷ್ಠ ಶೇಕಡಾ 2 ಕ್ಕೆ ಇಳಿಯುವ ನಾಲ್ಕರಲ್ಲಿ ಒಂದು ಅವಕಾಶವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.