ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶೃತಿ: ಆರ್ಚರ್ ದೀಪ್ತಿ ಕುಮಾರಿಗೆ ಹರಿದುಬಂದ ನೆರವು ಆರ್ಚರ್ ದೀಪ್ತಿ ಕುಮಾರಿ ಅವರು ರಾಂಚಿಯಲ್ಲಿ ಚಹಾದ ಅಂಗಡಿ ನಡೆಸುತ್ತಿರುವ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲ ನೀಡಿದ್ದು, ಆಟಗಾರ್ತಿಯ ದಯನೀಯ ಪರಿಸ್ಥಿತಿಗೆ ಮರುಗಿರುವ ಓದುಗರು ನೆರವಿನ ಮಹಾಪೂರವನ್ನೇ ಹರಿಸುತ್ತಿದ್ದಾರೆ. ರಾಂಚಿ: ಆರ್ಚರ್ ದೀಪ್ತಿ ಕುಮಾರಿ ಅವರು ರಾಂಚಿಯಲ್ಲಿ ಚಹಾದ ಅಂಗಡಿ ನಡೆಸುತ್ತಿರುವ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲ ನೀಡಿದ್ದು, ಆಟಗಾರ್ತಿಯ ದಯನೀಯ ಪರಿಸ್ಥಿತಿಗೆ ಮರುಗಿರುವ ಓದುಗರು ನೆರವಿನ ಮಹಾಪೂರವನ್ನೇ ಹರಿಸುತ್ತಿದ್ದಾರೆ.ಹೌದು..ಆರ್ಚರ್ ದೀಪ್ತಿ ಕುಮಾರಿ ರಾಂಚಿಯಲ್ಲಿ ಟೀ ಸ್ಟಾಲ್ ನಡೆಸುತ್ತಿರುವ ಕುರಿತು ವರದಿ ಪ್ರಕಟಿಸಿದ ನಂತರ ಆಟಗಾರ್ತಿಯ ತರಬೇತಿಗೆ ಹೊಸ ಉಪಕರಣಗಳನ್ನು ಖರೀದಿಸಲು ಸಹಾಯ ಮಾಡಲು ಓದುಗರು ಆರ್ಥಿಕ ನೆರವು ನೀಡುತ್ತಿದ್ದಾರೆ. ವರದಿಯಿಂದ ಪ್ರೇರೇಪಿತರಾಗಿರುವ ಕೇರಳದ ಉದ್ಯಮಿ ಮುಖೇಶ್ ಜೈನ್ ದೀಪ್ತಿಗೆ 11 ಸಾವಿರ ರೂ ನೀಡಿದ್ದು, ಈ ಕುರಿತು ಮಾತನಾಡಿರುವ ಅವರು 'ಕ್ರೀಡೆಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಹುಡುಗಿಗೆ ಬಿಲ್ಲು ಕೂಡ ಇಲ್ಲ ಎಂದು ಓದಿದ ನಂತರ ನಾನು ಆಘಾತಕ್ಕೊಳಗಾಗಿದ್ದೇನೆ" ಎಂದು ಜೈನ್ ಹೇಳಿದರು.ಅಂತೆಯೇ ದೀಪ್ತಿ ಕುಮಾರಿ ಅವರಿಗೆ ಕ್ರೀಡಾ ಉಪಕರಣಗಳನ್ನು ಖರೀದಿಸಲು 4.5 ಲಕ್ಷ ರೂಪಾಯಿ ಬೇಕು. ಎಲ್ಲರೂ ಸ್ವಲ್ಪ ಕೊಡುಗೆ ನೀಡಿದರೆ, ಹೊಸ ಸೆಟ್ ಖರೀದಿಸಲು ಅವರಿಗೆ ನೆರವಾಗುತ್ತದೆ. ನಾನು ನನ್ನ ಕೈಲಾದಷ್ಟು ಮಾಡಿದ್ದೇನೆ ಮತ್ತು ಇತರರಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ದೇಣಿಗೆ ನೀಡುವಂತೆ ನಾನು ಮನವಿ ಮಾಡುತ್ತೇನೆ ಎಂದು ಜೈನ್ ಹೇಳಿದರು, ಅಲ್ಲದೆ ಆಟಗಾರರ ಕುರಿತು ನಿರಾಸಕ್ತಿ ತೋರಿರುವ ಸರ್ಕಾರದ ನಡೆಯನ್ನು ಅವರು ಖಂಡಿಸಿದರು.ಇದನ್ನೂ ಓದಿ: ವಿರೋಧ, ಅಡೆತಡೆಗಳ ಬದಿಗೊತ್ತಿ ವೇಟ್‌ಲಿಫ್ಟಿಂಗ್'ನಲ್ಲಿ ಸಾಧನೆ ಮಾಡುತ್ತಿರುವ ಬೆಳಗಾವಿಯ ಅಕ್ಷತಾ!ಇತ್ತ ಚೆನ್ನೈನ ಮತ್ತೊಬ್ಬ ಓದುಗರಾದ ಸುಶ್ರೀ ಶಂಕರ್ ಕೂಡ ದೀಪ್ತಿ ಅವರಿಗೆ ಸಹಾಯ ಮಾಡಲು ಮುಂದಾಗಿದ್ದು, "ನನ್ನ ಮಗಳು ಜಿಮ್ನಾಸ್ಟ್ ಆಗಿದ್ದಾಳೆ ಮತ್ತು ಒಬ್ಬ ಕ್ರೀಡಾಪಟು ಸಹಿಸಿಕೊಳ್ಳುವ ಹೋರಾಟ ನನಗೆ ತಿಳಿದಿದೆ" ಎಂದು ಅವರು ಹೇಳಿದರು.ಇನ್ನು ತಮಗೆ ನೆರವು ನೀಡುತ್ತಿರುವವರಿಗೆ ಧನ್ಯವಾದ ಅರ್ಪಿಸಿರುವ ರಾಷ್ಟ್ರೀಯ ಮಟ್ಟದ ಆಟಗಾರ್ತಿ ದೀಪ್ತಿ ಕುಮಾರಿ, 'ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ನನ್ನ ಬಳಿ ಪದಗಳಿಲ್ಲ ಎಂದು ಹೇಳಿದ್ದಾರೆ.100ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವ ದೀಪ್ತಿ, ಆರ್ಚರಿ ಕಿಟ್ ಖರೀದಿಸಲು ತಾಯಿ ಮಾಡಿದ ಸಾಲವನ್ನು ತೀರಿಸಲು ಈಗ ಚಹಾ ಮಾರಾಟ ಮಾಡುತ್ತಿದ್ದಾರೆ.