ದೇಶದ ಕೋವಿಡ್ ವ್ಯಾಕ್ಸಿನೇಷನ್ ಪರಿಸ್ಥಿತಿಯನ್ನು ಅರೆಂಜ್ ಮದುವೆಗೆ ಹೋಲಿಸಿದ ಕಿರಣ್ ಮಜುಂದರಾ ಶಾ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ದೇಶದ ಕೋವಿಡ್ -19 ವ್ಯಾಕ್ಸಿನೇಷನ್ ಪರಿಸ್ಥಿತಿಯನ್ನು ಅರೆಂಜ್ ಮದುವೆಗೆ ಹೋಲಿಸಿದ್ದಾರೆ. ನವದೆಹಲಿ: ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ದೇಶದ ಕೋವಿಡ್ -19 ವ್ಯಾಕ್ಸಿನೇಷನ್ ಪರಿಸ್ಥಿತಿಯನ್ನು ಅರೆಂಜ್ ಮದುವೆಗೆ ಹೋಲಿಸಿದ್ದಾರೆ."ಭಾರತದಲ್ಲಿ ಲಸಿಕೆ ಪರಿಸ್ಥಿತಿಯು ಅರೆಂಜ್ ಮದುವೆಯಂತಿದೆ. ಮೊದಲು ಲಸಿಕೆ ಪಡೆಯಲು ಯಾರೂ ಸಿದ್ಧರಿರಲಿಲ್ಲ, ನಂತರ ಯಾವುದನ್ನೂ ಇಷ್ಟಪಡುವುದಿಲ್ಲ ಎಂದರು. ಬಳಿಕ ಯಾವುದನ್ನೂ ಪಡೆಯುವುದಿಲ್ಲ ಎಂದರು!! ಲಸಿಕೆ ಪಡೆದರೂ ತೃಪ್ತಿಕರವಾಗಿರದೇ ಮತ್ತೊಂದು ಉತ್ತಮವಾಗಿರಬಹುದು ಎಂದು ಯೋಜಿಸಲು ಆರಂಭ. ಈಗ ಯಾವ ಲಸಿಕೆಯನ್ನು ಪಡೆಯದವರು ಯಾವುದಾದರೂ ಒಂದು ಸಿಕ್ಕರೆ ಸಾಕು ಎನ್ನುತ್ತಿದ್ದಾರೆ" ಎಂದು ಮಜುಂದಾರ್ ಶಾ ಟ್ವೀಟ್ ಮಾಡಿದ್ದಾರೆ.ಈ ವಾರದ ಆರಂಭದಲ್ಲಿ, ಕೊರೋನಾ ಲಸಿಕೆ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಮಜುಂದಾರ್ ಶಾ ಅವರು, ನಾಗರಿಕರು ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯಬೇಕು ಮತ್ತು ಕೇಂದ್ರ ಸರ್ಕಾರ ಸಹ ಲಸಿಕೆ ಲಭ್ಯತೆಯ ಬಗ್ಗೆ ಉತ್ತಮ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದಿದ್ದರು.ಲಸಿಕೆಗಳ ಪೂರೈಕೆ ಏಕೆ ಕಡಿಮೆಯಾಗಿದೆ? ಪ್ರತಿ ತಿಂಗಳು 70 ಮಿಲಿಯನ್ ಡೋಸ್‌ಗಳನ್ನು ಎಲ್ಲಿ ನಿಯೋಜಿಸಲಾಗುತ್ತಿದೆ ಎಂದು ನಾವು ತಿಳಿಯಬಹುದೇ? ಈ ಸಸ್ಪೆನ್ಸ್ ತಪ್ಪಿಸಲು ನಮಗೆ ಉತ್ತಮ ಪಾರದರ್ಶಕತೆ ಬೇಕು. ಸರಬರಾಜಿನ ವೇಳಾಪಟ್ಟಿಯನ್ನು ಪ್ರಕಟಿಸಿದರೆ ಸಾರ್ವಜನಿಕರು ತಮ್ಮ ಸರದಿ ಬರುವವರೆಗೆ ತಾಳ್ಮೆಯಿಂದ ಕಾಯಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯವನ್ನು ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡಿದ್ದರು.