ಕೊರೋನಾ ಬಿಕ್ಕಟ್ಟು: ರಿಲಯನ್ಸ್ ಸಿಬ್ಬಂದಿಯ ವೇತನ ಶೇ. 10 ರಿಂದ 50ರಷ್ಟು ಕಡಿತ, ಇಡೀ ಸಂಬಳ ಬಿಟ್ಟುಕೊಟ್ಟ ಅಂಬಾನಿ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ದೇಶದ ಬಹುತೇಕ ಉದ್ಯಮಗಳು ನೆಲಕಚ್ಚಿವೆ. ಹಲವು ಕಂಪನಿಗಳು ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಮುಂಬೈ: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ದೇಶದ ಬಹುತೇಕ ಉದ್ಯಮಗಳು ನೆಲಕಚ್ಚಿವೆ. ಹಲವು ಕಂಪನಿಗಳು ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ದೇಶದ ಅತಿ ದೊಡ್ಡ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಇಂಡಸ್ಟ್ರೀಸ್ ಸಹ ಈ ಸಂಕಷ್ಟದಿಂದ ಪಾರಾಗಲು ಸಿಬ್ಬಂದಿಯ ವೇತನದಲ್ಲಿ ಶೇ. 10ರಿಂದ ಶೇ. 50ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ. ಇನ್ನು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ತಮ್ಮ ಇಡೀ ಸಂಬಳವನ್ನೇ ತ್ಯಾಗ ಮಾಡಲು ಮುಂದಾಗಿದ್ದಾರೆ.ಮುಕೇಶ್ ಅಂಬಾನಿ ಅವರು ತಮ್ಮ 15 ಕೋಟಿ ರೂ. ವೇತನ ಬಿಟ್ಟುಕೊಟ್ಟಿದ್ದು, ರಿಲಯನ್ಸ್ ನಿರ್ದೇಶಕ ಮಂಡಳಿಯ ಕಾರ್ಯಕಾರಿ ನಿರ್ದೇಶಕರು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಹಿರಿಯ ಸಿಬ್ಬಂದಿಯ ವೇತನವನ್ನು ಶೇ. 30ರಿಂದ ಶೇ.50ರಷ್ಟು ಕಡಿತಗೊಳಿಸಲಾಗುತ್ತಿದೆ. 15 ಲಕ್ಷ ರೂಪಾಯಿಗಿಂತ ಕಡಿಮೆ ವೇತನ ಪಡೆಯುವ ಸಿಬ್ಬಂದಿ ವೇತನದಲ್ಲಿ ಯಾವುದೇ ಕಡಿತ ಇಲ್ಲ. ಆದರೆ 15 ಲಕ್ಷ ರೂ. ಗಿಂತ ಹೆಚ್ಚಿರುವ ಸಿಬ್ಬಂದಿಯ ವೇತನದಲ್ಲಿ ಶೇ. 10 ರಷ್ಟು ಕಡಿತಗೊಳಿಸಲಾಗುತ್ತಿದೆ ಎಂದು ರಿಲಾಯನ್ಸ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.ರಿಲಯನ್ಸ್ ನ ಕಂಪನಿಗಳಲ್ಲಿ ಅತೀ ಹೆಚ್ಚು ಹೊಡೆತ ಕಂಡಿರುವುದು ಹೈಡ್ರೋಕಾರ್ಬನ್ ವ್ಯವಹಾರ. ಈ ಹಿನ್ನೆಲೆಯಲ್ಲಿ ಹೈಡ್ರೋಕಾರ್ಬನ್ ವ್ಯವಹಾರದಲ್ಲಿ ವೆಚ್ಚ ಕಡಿತಕ್ಕೆ ಸಂಸ್ಥೆ ಮುಂದಾಗಿದೆ. ಎಲ್ಲಾ ಸ್ತರದಲ್ಲೂ ಅನಗತ್ಯ ವೆಚ್ಚವನ್ನ ಕಡಿಮೆಗೊಳಿಸಲಾಗುತ್ತಿದೆ. ಅದರಲ್ಲಿ ಉದ್ಯೋಗಿಗಳ ವೇತನ ಕಡಿತವೂ ಸೇರಿಕೊಂಡಿದೆ.ಹೈಡ್ರೋಕಾರ್ಬನ್ ವಿಭಾಗದಲ್ಲಿರುವ ವಾರ್ಷಿಕ 15 ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆಯುತ್ತಿರುವ ಎಲ್ಲಾ ರಿಲಯನ್ಸ್ ಉದ್ಯೋಗಿಗಳು ಶೇ. 10ರಷ್ಟು ಸಂಬಳ ಬಿಟ್ಟುಕೊಡಲಿದ್ದಾರೆ. ಹಾಗೆಯೇ, ವಾರ್ಷಿಕವಾಗಿ ನೀಡಲಾಗುವ ಕ್ಯಾಷನ್ ಬೋನಸ್ ಮತ್ತು ಇನ್ಸೆಂಟಿವ್ಗಳನ್ನು ಅನಿರ್ದಿಷ್ಟಾವಧಿಯವರೆಗೆ ತಡೆಹಿಡಿಯಲಾಗಿದೆ.