ದೇಶದಲ್ಲಿ ಆರ್ಥಿಕ ಕುಸಿತ; ಪ್ರಧಾನಿ-ವಿತ್ತ ಸಚಿವರ ಮಧ್ಯೆ ಮಾತುಕತೆ, ಸರ್ಕಾರದಿಂದ ಅಲ್ಪಾವಧಿ ಕ್ರಮ ಘೋಷಣೆ? ದೇಶದಲ್ಲಿ ಆರ್ಥಿಕ ಸ್ಥಿತಿಗತಿ ತೀವ್ರ ಮಟ್ಟಕ್ಕೆ ಕುಸಿದಿದ್ದು ಇದರ ಪರಿಣಾಮ ನೇರವಾಗಿ ಉದ್ಯೋಗ ಸೃಷ್ಟಿ ಮೇಲೆ ಆಗಿದೆ. ಇದಕ್ಕೆ ಕ್ರಮ ಕೈಗೊಳ್ಳಲು ಇದೀಗ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಅಖಾಡಕ್ಕೆ ಇಳಿದಂತಿದೆ. ನವದೆಹಲಿ: ದೇಶದಲ್ಲಿ ಆರ್ಥಿಕ ಸ್ಥಿತಿಗತಿ ತೀವ್ರ ಮಟ್ಟಕ್ಕೆ ಕುಸಿದಿದ್ದು ಇದರ ಪರಿಣಾಮ ನೇರವಾಗಿ ಉದ್ಯೋಗ ಸೃಷ್ಟಿ ಮೇಲೆ ಆಗಿದೆ. ಇದಕ್ಕೆ ಕ್ರಮ ಕೈಗೊಳ್ಳಲು ಇದೀಗ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಅಖಾಡಕ್ಕೆ ಇಳಿದಂತಿದೆ. ಮೊನ್ನೆ ಕೇಂದ್ರ ಅರ್ಥ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅವರ ತಂಡ ಪರಿಸ್ಥಿತಿಯನ್ನು ಪರಾಮರ್ಶಿಸಿ ದೇಶದ ಆರ್ಥಿಕತೆಯ ಪುನರುಜ್ಜೀವನಕ್ಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ನಿನ್ನೆ ಪ್ರಧಾನ ಮಂತ್ರಿ ಅರ್ಥ ಸಚಿವರ ನಡುವೆ ಸಭೆ ನಡೆದಿದೆ.ಸಭೆಯಲ್ಲಿ ಏನು ಮಾತುಕತೆಯಾಯಿತು ಎಂದು ಮಾಹಿತಿ ಹೊರಬೀಳದಿದ್ದರೂ ಸಹ ಹಣಕಾಸು ಸಚಿವಾಲಯ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಆರ್ಥಿಕತೆಯ ಕುಸಿತ ಮತ್ತು ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾತುಕತೆ ನಡೆದಿದೆ. ಕೆಲವು ಅಲ್ಪಾವಧಿಯ ಕ್ರಮಗಳನ್ನು ಸದ್ಯದಲ್ಲಿಯೇ ಕೇಂದ್ರ ಸರ್ಕಾರ ಘೋಷಣೆ ಮಾಡಲಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿದುಬಂದಿದೆ.ಮೂಲಗಳ ಪ್ರಕಾರ, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಸರ್ಕಾರವು ಮೂಲಸೌಕರ್ಯಗಳ ಮೇಲೆ ಖರ್ಚು ಹೆಚ್ಚು ಮಾಡಬಹುದು ಎನ್ನಲಾಗುತ್ತಿದೆ. ನಿನ್ನೆ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿಯವರು ಆಧುನಿಕ ಬಂದರು, ಹೆದ್ದಾರಿ, ರೈಲ್ವೆ, ವಿಮಾನ ನಿಲ್ದಾಣ, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಮುಂದಿನ 5 ವರ್ಷಗಳಲ್ಲಿ 100 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಾಗುವುದು ಎಂದು ಘೋಷಿಸಿದ್ದರು.ಸಂಪತ್ತು ಸೃಷ್ಟಿಕರ್ತರನ್ನು ಯಾವತ್ತೂ ಶಂಕೆಯಿಂದ ಅಥವಾ ಸಂಶಯದಿಂದ ನೋಡಬೇಡಿ, ದೇಶದಲ್ಲಿ ಸಂಪತ್ತು, ಹಣ ಸೃಷ್ಟಿಯಾದರೆ ಮಾತ್ರ ಅದನ್ನು ಹಂಚಲು ಸಾಧ್ಯವಾಗುತ್ತದೆ ಎಂದಿದ್ದರು.