ದಂಡ ಕಟ್ಟಿದ ವಿದ್ಯಾರ್ಥಿಗೆ ತಮ್ಮ ದುಡ್ಡು ಕೊಟ್ಟ ಮಹಿಳಾ ಸಬ್ ಇನ್ಸ್‌ಪೆಕ್ಟರ್, ವಿಡಿಯೋ ವೈರಲ್
ಬಾಗಲಕೋಟೆ,ಜು.27-ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ದಂಡ ಹಾಕಿದ ಮಹಿಳಾ ಸಬ್‌ ಇನ್ಸ್ ಪೆಕ್ಟರ್‌ರವರು ತಮ್ಮ ಹಣದಿಂದ ಪಾವತಿಸಿದ ದಂಡದ ಹಣವನ್ನು ವಾಪಸ್‌‍ ನೀಡಿ ಮಾನವೀಯತೆ ಮೆರೆದ ಮನಮಿಡಿಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್‌ ಪೊಲೀಸ್‌‍ ಠಾಣೆಯ ಸಬ್‌ ಇನ್ಸ್ ಪೆಕ್ಟರ್‌ ಎಸ್‌‍.ಆರ್‌.ನಾಯಕ್‌ ಅವರು ಕಂಠಿ ವೃತ್ತದಲ್ಲಿ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಹಾಕುತ್ತಿದ್ದರು.
ಅದೇ ವೇಳೆ ಮೂವರು ಅಪ್ರಾಪ್ತ ಬಾಲಕರು ದ್ವಿಚಕ್ರ ವಾಹನದಲ್ಲಿ ಬಂದರು. ಅವರನ್ನು ಹಿಡಿದು ನಿಯಮಾನುಸಾರ ದಂಡ ಹಾಕಿದ್ದಾರೆ. ಮೂವರು ಬಾಲಕರು ತಮ್ಮ ಬಳಿಯಿರುವ 100, 200 ರೂ.ಗಳನ್ನು ಹೊಂದಿಸಿ ಒಟ್ಟು 500 ರೂ.ಗಳನ್ನು ಪಾವತಿಸಿ ರಶೀದಿ ಪಡೆದಿದ್ದಾರೆ.
ದಂಡ ಪಾವತಿಸಿ ತೆರಳುವಾಗ ಒಬ್ಬ ಅಪ್ರಾಪ್ತನ ಮುಖದಲ್ಲಿ ಖಿನ್ನತೆಯನ್ನು ಸಬ್‌ ಇನ್ಸ್ ಪೆಕ್ಟರ್‌ ಎಸ್‌‍.ಆರ್‌.ನಾಯಕ್‌ ಗುರುತಿಸಿದ್ದಾರೆ. ಹತ್ತಿರ ಕರೆದು ಆತನ ಪರಿಸ್ಥಿತಿಯನ್ನು ಕೇಳಿದ್ದಾರೆ.
ಕಾಲೇಜಿಗೆ ಶುಲ್ಕ ಕಟ್ಟುವ ಹಣವನ್ನು ದಂಡ ಪಾವತಿಸಿದ್ದಾಗಿ ಆತ ಹೇಳಿ ಮುಖ ಸಣ್ಣದು ಮಾಡಿಕೊಂಡಿದ್ದಾನೆ. ಇದರಿಂದ ಮನಕರಗಿದ ಮಹಿಳಾ ಸಬ್‌ ಇನ್ಸ್ ಪೆಕ್ಟರ್‌ ಆತನನ್ನು ತಬ್ಬಿ ಸಂತೈಸಿ ತಮ್ಮ ಜೇಬಿನಿಂದ ಒಂದಿಷ್ಟು ಹಣ ತೆಗೆದು ಆತನಿಗೆ ಕೊಟ್ಟು ಮತ್ತೊಮೆ ಇಂತಹ ತಪ್ಪು ಮಾಡದಂತೆ ಬುದ್ಧಿ ಹೇಳಿ ಬೆನ್ನು ತಟ್ಟಿ ಕಳುಹಿಸಿದ್ದಾರೆ.
ಈ ವಿಡಿಯೋ ವ್ಯಾಪಕ ವೈರಲ್‌ ಆಗಿದ್ದು, ಮಹಿಳಾ ಸಬ್‌ಇನ್ಸ್ ಪೆಕ್ಟರ್‌ರ ಕೆಲಸಕ್ಕೆ ಸಮಾಜ ಮತ್ತು ಇಲಾಖೆಯಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌‍.ಆರ್‌.ನಾಯಕ್‌, ನಾನೂ ರೈತನ ಮಗಳು.
ತಂದೆ ಕಾಲವಾದ ಬಳಿಕ ತಾಯಿ ಕೂಲಿ ಮಾಡಿ ನಮನ್ನು ಓದಿಸಿದರು. ಎಸ್‌‍ಎಸ್‌‍ಎಲ್‌ಸಿ ನಂತರ ಕಾಲೇಜಿಗೆ ಸೇರಲು ನನಗೆ ಯಾರೂ ಸಹಾಯ ಮಾಡಲಿಲ್ಲ. ಆಗಿನ ಕಾಲಕ್ಕೆ ನನಗೆ ಯಾರಾದರೂ ನೂರು ರೂಪಾಯಿ ಕೊಟ್ಟಿದ್ದರೆ ಬಹುಶಃ ಇನ್ನಷ್ಟು ಚೆನ್ನಾಗಿ ಓದಿ ಬದುಕು ಕಟ್ಟಿಕೊಳ್ಳುತ್ತಿದ್ದೆ.
ನನ್ನ ಕಷ್ಟದ ದಿನಗಳು ಇಂದು ದಂಡ ಕಟ್ಟಿದ ವಿದ್ಯಾರ್ಥಿಯನ್ನು ನೋಡಿದಾಗ ನೆನಪಾದವು. ಹೆಲೆಟ್‌ ಇಲ್ಲದೆ ಮೂರು ಜನ ಅಪ್ರಾಪ್ತರು ದ್ವಿಚಕ್ರ ವಾಹನದಲ್ಲಿ ಬಂದಿದ್ದು ತಪ್ಪು. ಅದಕ್ಕಾಗಿ ಕಾನೂನುಬದ್ಧವಾದ ದಂಡವನ್ನು ವಿಧಿಸಲಾಗಿತ್ತು. ಆದರೆ ಆ ಹಣ ಒಬ್ಬ ವಿದ್ಯಾರ್ಥಿಯ ಕಾಲೇಜಿನ ಶುಲ್ಕವೆಂದು ಹೇಳಿದಾಗ ನನ್ನ ಕಷ್ಟದ ದಿನಗಳು ನೆನಪಾಗಿ ನನ್ನ ಕೈಲಾದ ಸಹಾಯ ಮಾಡಿದೆ. ಈ ವಿಡಿಯೋ ವೈರಲ್‌ ಆಗುವುದು ನನಗೆ ಗೊತ್ತಿರಲಿಲ್ಲ ಎಂದರು.
ಪೊಲೀಸರಿಗೆ ಮಾನವೀಯತೆ ಇಲ್ಲ ಎಂಬುದು ಸರಿಯಲ್ಲ. ನಮದು ಜನಸ್ನೇಹಿ ವ್ಯವಸ್ಥೆ. ಸಾರ್ವಜನಿಕರು ಕೂಡ ಸಂಚಾರಿ ನಿಯಮಗಳನ್ನು ಪಾಲಿಸಬೇಕು, ಸುರಕ್ಷತೆಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.