ಕಂದಕಕ್ಕೆ ಉರುಳಿದ್ದ ಲಾರಿ, ಮೂವರು ಪ್ರಾಣಾಪಾಯದಿಂದ ಪಾರು
ಹಾಸನ, ಆ.22-ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಲಾರಿ ಬಿದ್ದ ಪರಿಣಾಮ ಚಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸಕಲೇಶಪುರ ತಾಲ್ಲೂಕಿನ, ಶಿರಾಡಿಘಾಟ್‌ ರಸ್ತೆಯ, ದೋಣಿಗಲ್‌ ಬಳಿ ಬೆಂಗಳೂರಿನಿಂದ ಮಂಗಳೂರು ಕಡೆಗೆ ಸರಕು ತುಂಬಿಕೊಂಡು ತೆರಳುತ್ತಿದ್ದ ಲಾರಿ ತಡರಾತ್ರಿ ತಿರುವಿನಲ್ಲಿ ಕೆಲ ದಿನಗಳ ಹಿಂದೆ ಭಾರಿ ಮಳೆಯಿಂದ ನೀರು ಹರಿದು ಹೆದ್ದಾರಿ ಪಕ್ಕದಲ್ಲಿ ಸೃಷ್ಟಿಯಾಗಿದ್ದ ಬೃಹತ್‌ ಕಂದಕಕ್ಕೆ ಬಿದ್ದು ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದೆ.
ಲಾರಿ ಉರುಳಿಬಿದ್ದಿರುವ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಲಾರಿಯಲ್ಲಿ ಸಿಲುಕಿದ್ದ ಕುಣಿಗಲ್‌ ಮೂಲದ ಲಾರಿ ಚಾಲಕ ಜಾರ್‌, ಸಿಮ್ರಾನ್‌ ಮತ್ತು ಹತಾಹುಲ್ಲರನ್ನು ರಕ್ಷಿಸಿ ಗಾಯಾಳುಗಳಿಗೆ ಸಕಲೇಶಪುರ ಕ್ರಾರ್ಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಸಕಲೇಶಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.