ಜೆಡಿಎಸ್‌‍ ತೆಕ್ಕೆಗೆ ಹಾಸನ ನಗರಸಭೆ, ಅಧ್ಯಕ್ಷರಾಗಿ ಚಂದ್ರೇಗೌಡ- ಉಪಾಧ್ಯಕ್ಷರಾಗಿ ಲತಾ ಆಯ್ಕೆ
ಹಾಸನ, ಆ.22-ಕುತೂಹಲಕ್ಕೆ ಕಾರಣವಾಗಿದ್ದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆ ಜೆಡಿಎಸ್‌‍ ಸದಸ್ಯ ಚಂದ್ರೇಗೌಡ (ಅಧ್ಯಕ್ಷ) ಹಾಗೂ ಬಿಜೆಪಿಯಿಂದ ಗೆದ್ದಿದ್ದರೂ ಜೆಡಿಎಸ್‌‍ ನೊಂದಿಗೆ ಗುರುತಿಸಿಕೊಂಡಿದ್ದ 35ನೇ ವಾರ್ಡ್‌ ಸದಸ್ಯೆ ಲತಾದೇವಿ ಸುರೇಶ್‌ (ಉಪಾಧ್ಯಕ್ಷೆ) ಆಯ್ಕೆಯಾಗುವ ಮೂಲಕ ದಳಪತಿಗಳು ಮೇಲುಗೈ ಸಾಧಿಸಿದಂತಾಗಿದೆ.
ಒಟ್ಟು 35 ಸದಸ್ಯಬಲದ ನಗರಸಭೆಯಲ್ಲಿ 17 ಜೆಡಿಎಸ್‌‍, 14 ಬಿಜೆಪಿ, ಕಾಂಗ್ರೆಸ್‌‍ ಹಾಗೂ ಪಕ್ಷೇತರ ಇಬ್ಬರು ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು 19 ಮತಗಳ ಅಗತ್ಯವಿತ್ತು. ಇಬ್ಬರು ಕಾಂಗ್ರೆಸ್‌‍ ಸದಸ್ಯರನ್ನು ಹೊರತುಪಡಿಸಿ ಉಳಿದ ಎಲ್ಲ 34 ಸದಸ್ಯರು ಚಂದ್ರೇಗೌಡ ಪರ ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್‌‍ ನ ರೋಹಿನ್‌ ತಾಜ್‌ ಕೇವಲ 2 ಮತಗಳನ್ನು ಪಡೆದರು.
ಭಾರಿ ಕುತೂಹಲ ಕೆರಳಿಸಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಇಬ್ಬರು ಸದಸ್ಯೆಯರು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಶಿಲ್ಪಾ ವಿಕ್ರಂ 14 ಮತಗಳ್ನು ಪಡೆದು ಪರಾಭವಗೊಂಡರು. ಲತಾದೇವಿ ಅವರು ಜೆಡಿಎಸ್‌‍ ಮತ್ತು ಪಕ್ಷೇತರರ ಬೆಂಬಲದೊಅದಿಗೆ ಒಟ್ಟು 21 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಶಾಸಕ ಎಚ್‌.ಪಿ.ಸ್ವರೂಪ್‌ ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವಂತೆ ಒಂದೆಡೆ ಬಿಜೆಪಿ ಸದಸ್ಯೆ ಉಪಾಧ್ಯಕ್ಷೆ ಆಗುವಂತೆ ನೋಡಿಕೊಳ್ಳುವ ಜತೆಗೆ ತಮ್ಮ ಆಪ್ತರಾಗಿದ್ದ ಚಂದ್ರೇಗೌಡ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಲ್ಲಿಯೂ ಯಶಸ್ವಿಯಾದರು.ಇದರಿಂದ ಅಧ್ಯಕ್ಷ ಸ್ಥಾನವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಜತೆಗೆ ಮೈತ್ರಿ ಧರ್ಮ ಪಾಲನೆ ಮಾಡಿದಂತೆಯೂ ಆಗಬೇಕು ಎಂಬಅತೆ ಜೆಡಿಎಸ್‌‍ ಪರವಾಗಿದ್ದ ಅಭ್ಯರ್ಥಿಯನ್ನು ಉಪಾಧ್ಯಕ್ಷೆಯನ್ನಾಗಿ ಮಾಡುವಲ್ಲಿ ಜಾಣ್ಮೆ ಮೆರೆದು ಎರಡೂಕಡೆ ಪಾರುಪಥ್ಯ ಸಾಧಿಸಿದರು.
ರಾಜಕೀಯ ಜಾಣ್ಮೆ ಮೆರೆದ ಲತಾದೇವಿ:ಜೆಡಿಎಸ್‌‍-ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಕಾರಣ ಈ ಚುನಾವಣೆಯಲ್ಲಿಯೂ ಮೈತ್ರಿ ಧರ್ಮ ಅನುಸರಿಸಲು ತಾವು ಸಿದ್ಧರಿದ್ದು, ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಬಿಜೆಪಿ ಬೇಡಿಕೆಯಿಟ್ಟಿತ್ತು. ಅಂತೆಯೇ ತನ್ನ ಅಭ್ಯರ್ಥಿಯಾಗಿ ಶಿಲ್ಪಾ ಅವರನ್ನು ಕಣಕ್ಕಿಳಿಸಿ ವಿಪ್‌ ಜಾರಿ ಮಾಡಿತ್ತು.
ಇದರಿಂದಾಗಿ ಬಿಜೆಪಿ ಎಲ್ಲ ಸದಸ್ಯರು ತಮ್ಮ ಅಭ್ಯರ್ಥಿ ಪರವಾಗಿ ಮತ ಚಲಾಯಿಸಬೇಕಿತ್ತು. ಈ ನಡುವೆ ಬಿಜೆಪಿಯಿಂದ ಗೆದ್ದಿದ್ದರೂ ಜೆಡಿಎಸ್‌‍ ಜತೆ ಹೆಚ್ಚು ಗುರುತಿಸಿಕೊಂಡಿದ್ದ ಲತಾದೇವಿ ಅವರೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರೂ ವಿಪ್‌ ಜಾರಿಯಲ್ಲಿದ್ದ ಕಾರಣ ಅನರ್ಹತೆಯ ಭಿತಿಯಿಂದ ತಮ್ಮ ವಿರುದ್ಧವೇ ಮತ ಚಾಲಿಯಿಸಿ ಶಿಲ್ಪಾ ವಿಕ್ರಂ ಪರವಾಗಿ ಕೈ ಎತ್ತಿದ್ದರು.
ಫಲ ಕೊಡದ ಪ್ರೀತಂಗೌಡ ದಾಳ:ಜೆಡಿಎಸ್‌‍-ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ತಲಾ 10 ತಿಂಗಳು ಎರಡೂ ಪಕ್ಷದ ನಡುವೆ ಅಧಿಕಾರ ಹಂಚಿಕೆ ಆಗಬೇಕು. 10 ತಿಂಗಳು ಜೆಡಿಎಸ್‌‍ ಹಾಗೂ ಉಳಿದ ಹತ್ತು ತಿಂಗಳು ಬಿಜೆಪಿಗೆ ಅವಕಾಶ ಸಿಗಬೇಕು ಎಂಬ ದಾಳ ಉರುಳಿಸಿದ್ದರು.
ಆದರೆ ಪ್ರತಿದಾಳ ಉರುಳಿಸಿದ ಜೆಡಿಎಸ್‌‍ ತಮ್ಮ ಪಕ್ಷದ ಸದಸ್ಯ ಅಧ್ಯಕ್ಷ ಸ್ಥಾನ ಅಲಂಕರಿಸುವಂತೆ ಮಾಡಿದ ಜತೆಗೆ ಬಿಜೆಪಿ ಸದಸ್ಯೆ ಉಪಾಧ್ಯಕ್ಷೆಯಾದರೂ ತಮ್ಮ ಬೆಂಬಲಕ್ಕೆ ನಿಂತಿರುವವರೇ ಆಯ್ಕೆಯಾಗುವಂತೆ ಮಾಡುವ ಮೂಲಕ ಪ್ರೀತಂ ಗೌಡ ಹಾಗೂ ಬಿಜೆಪಿಗರಿಗೆ ಟಕ್ಕರ್‌ ಕೊಟ್ಟಿದ್ದಾರೆ.
ವಿಪ್‌ ಜಾರಿ ಅಸ್ತ ಪ್ರಯೋಗದ ಮೂಲಕ ಶಿಲ್ಪಾ ಚಿಕ್ರಂ ಅವರನ್ನು ಉಪಾಧ್ಯಕ್ಷರನ್ನಾಘಿ ಮಾಡಬೇಕು ಎಂಬ ಯಂತ್ರವೂ ಫಲಿಸದೇ ಶಾಸಕ ಸ್ವರೂಪ್‌ ಪ್ರಕಾಶ್‌ ಈ ಮೂಲಕ ಪ್ರೀತಂ ಜೆ.ಗೌಡ ಎದುರು ಮೇಲುಗೈ ಸಾಧಿಸಿದಂತಾಗಿದೆ.