ಹೆದ್ದಾರಿಯಲ್ಲಿ ಬಿದ್ದ ಬೈಕ್ ಸವಾರನ ಮೇಲೆ ಹರಿದ ವಾಹನಗಳು, ಯುವಕನ ದೇಹ ಛಿದ್ರ
ಹಾಸನ,ಮಾ.23-ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಹಿಂದಿನಿಂದ ಬಂದ ವಾಹನಗಳು ಹರಿದು ಯುವಕನ ದೇಹ ಛಿದ್ರವಾದ ಹೃದಯ ವಿದ್ರಾವಕ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಚನ್ನರಾಯಪಟ್ಟಣ ಬೈಪಾಸ್‍ನಲ್ಲಿ ಕಳೆದ ರಾತ್ರಿ ನಡೆದಿದೆ.
ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ, ನಗರದ ಗೌರಿ ಕೊಪ್ಪಲಿನ ರಾಕೇಶ್ (27) ಮೃತ ಬೈಕ್ ಸವಾರ.ಬೆಂಗಳೂರಿನಿಂದ ತನ್ನ ಕೆಟಿಎಂ ಬೈಕ್‍ನಲ್ಲಿ ನಗರಕ್ಕೆ ಬರುತ್ತಿದ್ದ ಆತ ವೇಗವಾಗಿ ಬೈಕ್ ಚಲಾಯಿಸುತ್ತಿದ್ದಾಗ ಬೈಪಾಸ್‍ನಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಮೇಲೆ ಬಿದ್ದಿದೆ.
ಹಿಂದಿನಿಂದ ವೇಗವಾಗಿ ಬರುತ್ತಿದ್ದ ಮೂರ್ನಾಲ್ಕು ವಾಹನಗಳು ನಿಯಂತ್ರಣ ಸಾಧ್ಯವಾಗದೆ ಆತನ ಮೇಲೆ ಹರಿದಿವೆ. ಇದರಿಂದ ಸ್ಥಳದಲ್ಲೇ ಆತ ಪ್ರಾಣ ಕಳೆದುಕೊಂಡಿದ್ದಲ್ಲದೇ ದೇಹವೂ ಛಿದ್ರಗೊಂಡಿದೆ.
ರಾಕೇಶ್ ಮೇಲೆ ಹರಿದ ವಾಹನಗಳೆಲ್ಲವೂ ನಿಲ್ಲಿಸದೆ ಪರಿಯಾಗಿವೆ. ಆದರೆ ಹಿಂದಿನಿಂದ ಬಂದ ಕಾರೊಂದು ದೇಹದ ಮೇಲೆ ಹತ್ತುವುದನ್ನು ತಪ್ಪಿಸಲು ಯತ್ನಿಸಿ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಕಾರಿನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸಂಬಂಧ ಚನ್ನರಾಯಪಟ್ಟಣ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.