ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ಸಾವು
ಕೊಪ್ಪಳ, ಮೇ 28-ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಹುಮ್ನಾಬಾದ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಪ್ಪಳ ತಾಲೂಕು ಹೊಸ ಲಿಂಗಾಪುರದಲ್ಲಿ ನೆಲೆಸಿದ್ದ ಅಜ್ಜಿ ರಾಜೇಶ್ವರಿ(50), ಮಗಳು ವಸಂತಾ(28) ಹಾಗೂ ಮೊಮಗ ಸಾಯಿ ಧರ್ಮತೇಜು(5) ಮೃತಪಟ್ಟವರು.
ವಸಂತಾ ಅವರು ಗೊಂಬೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಆರೀಫ್‌ ಎಂಬಾತನೊಂದಿಗೆ ಅಂತರ್‌ ಧರ್ಮ ವಿವಾಹವಾಗಿದ್ದಾರೆಂದು ಹೇಳಲಾಗಿದ್ದು, ಆರೀಫ್‌ ಅವರು ದೆಹಲಿಯಲ್ಲಿ ನೆಲೆಸಿದ್ದಾರೆ. ರಾತ್ರಿ ಎಂದಿನಂತೆ ಈ ಮೂವರು ಊಟ ಮಾಡಿ ಮಲಗಿದ್ದು, ಬೆಳಗಾಗುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ 8.30ರ ಸುಮಾರಿನಲ್ಲಿ ರಾಜೇಶ್ವರಿ ಅವರನ್ನು ಮಾತನಾಡಿಸಲು ಪರಿಚಯಸ್ಥರೊಬ್ಬರು ಅವರ ಮನೆ ಬಳಿ ಹೋಗಿ ಬಾಗಿಲು ತಟ್ಟಿದಾಗ ತೆಗೆದಿಲ್ಲ. ಹಲವಾರು ಬಾರಿ ಕೂಗಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಗಾಬರಿಯಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಹುಮ್ನಾಬಾದ್‌ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮನೆಯೊಳಗೆ ಹೋಗಿ ನೋಡಿದಾಗ ಅಜ್ಜಿ ಹಾಗೂ ಮೊಮ್ಮಗನ ಮೃತದೇಹ ಬೆಡ್‌ರೂಂನಲ್ಲಿ ಪತ್ತೆಯಾದರೆ ಮಗಳು ವಸಂತಾ ಶವ ಅಡುಗೆ ಮನೆಯಲ್ಲಿ ಕಂಡುಬಂದಿದೆ.
ಈ ಬಗ್ಗೆ ಹುಮ್ನಾಬಾದ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಈ ಮೂವರ ಸಾವು ಕೊಲೆಯೋ ಅಥವಾ ಆತಹತ್ಯೆಯೋ ಎಂಬುವುದು ವೈದ್ಯಕೀಯ ಪರೀಕ್ಷೆ ವರದಿಯಿಂದ ಗೊತ್ತಾಗಬೇಕಿದೆ.