ಅಂಬ್ಯುಲೆನ್ಸ್- ಬೈಕ್‌ ನಡುವೆ ಭೀಕರ ಅಪಘಾತ : ಮೂವರು ಯುವಕರು ದುರ್ಮರಣ
ಶಿವಮೊಗ್ಗ, ಜೂ.29– ಅಂಬ್ಯುಲೆನ್ಸ್ ಹಾಗೂ ಬೈಕ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸವಾರರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಶಿಕಾರಿಪುರ ಗ್ರಾಮಾಂತರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಹಳೆ ಜೋಗದ ನಿವಾಸಿಗಳಾದ ಪ್ರಸನ್ನ(25), ಕಾರ್ತಿಕ್‌(24) ಮತ್ತು ಅರುಣ್‌ಕುಮಾರ್‌(26) ಮೃತ ಬೈಕ್‌ ಸವಾರರು.ಈ ಮೂವರು ಯುವಕರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಸಣ್ಣದಾಗಿ ಮಳೆ ಬರುತ್ತಿತ್ತು.
ಶಿವಮೊಗ್ಗದಿಂದ ಶಿಕಾರಿಪುರದ ಮೂಲಕ ಮಾಸೂರು ಗ್ರಾಮಕ್ಕೆ ಒಂದೇ ಬೈಕ್‌ನಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿನಲ್ಲಿ ಬರುತ್ತಿದ್ದಾಗ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದ ಬಳಿ ಎದುರಿಗೆ ಅತಿ ವೇಗವಾಗಿ ಬರುತ್ತಿದ್ದ ಅಂಬ್ಯುಲೆನ್ಸ್ ಬೈಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಮೂವರೂ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಶಿಕಾರಿಪುರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೂವರು ಯುವಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟ್ರಾಫಿಕ್‌ ಜಾಮ್‌:
ಅಪಘಾತದಿಂದಾಗಿ ಅಂಬ್ಯುಲೆನ್‌್ಸ ಮತ್ತು ಬೈಕ್‌ ರಸ್ತೆಯಲ್ಲಿ ನಿಂತಿದ್ದರಿಂದ ಕೆಲಕಾಲ ಈ ಮಾರ್ಗದಲ್ಲಿ ಬೆಳಗಿನ ಜಾವ ಸಂಚಾರಕ್ಕೆ ಅಡಚರಣೆ ಉಂಟಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.