ಎಗ್ ಪಪ್ಸ್ ಹಣ ಕೇಳಿದ್ದಕ್ಕೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು
ಮೈಸೂರು,ಜು.8-ಚಂಪಾಕಲಿ ಹಾಗೂ ಪಪ್ಸ್ ತಿಂದ ಹಣ ಕೇಳಿದ್ದಕ್ಕೆ ಬೇಕರಿ ನೌಕರನಿಗೆ ಚಾಕುವಿನಿಂದ ಇರಿದಿರುವ ಘಟನೆ ನಗರದ ಹೂಟಗಳ್ಳಿ ಕಾಲೋನಿಯಲ್ಲಿ ನಡೆದಿದೆ. ಮಹಮದ್‌ ಸಾಜಿದ್‌ ಚಾಕು ಇರಿತಕ್ಕೆ ಒಳಗಾದ ಬೇಕರಿ ನೌಕರ.
ಕೃಷ್ಣ ಬೇಕರಿಗೆ ಬಂದ ರೌಡಿಶೀಟರ್‌ ಪ್ರಜ್ವಲ್‌ ಅಲಿಯಾಸ್‌‍ ಸ್ಪಾಟ್‌ ಹಾಗೂ ಸಂಜು ಚಂಪಾಕಲಿ ಹಾಗೂ ಪಪಪ್ಸ್ ತಿಂದಿದ್ದಾರೆ. ಈ ವೇಳೆ ಬೇಕರಿ ನೌಕರ ಸಾಜಿದ್‌ ಹಣ ಕೇಳಿದಾಗ ಟ್ರೇಗಳನ್ನು ತಳ್ಳಿ ಬೇಕರಿ ಪದಾರ್ಥಗಳನ್ನು ಬೀಳಿಸಿ, ನಮ ಬಳಿಯೇ ಹಣ ಕೇಳುತ್ತೀಯ ಎಂದು ದೌರ್ಜನ್ಯ ಮಾಡಿದ್ದಾರೆ ಎನ್ನಲಾಗಿದೆ.
ಮಾತಿಗೆ ಮಾತು ಬೆಳೆದಿದ್ದು, ರೌಡಿಸಂ ಪ್ರದರ್ಶಿಸಿ ಮಹಮದ್‌ ಸಾಜಿದ್‌ಗೆ ಚಾಕುವಿನಿಂದ ಇರಿದಿದ್ದಾರೆ. ದಪ್ಪನೆಯ ಸ್ವೆಟ್ಟರ್‌ ಧರಿಸಿದ್ದರಿಂದ ಚಾಕು ಅಷ್ಟೇನೂ ಆಳವಾಗಿ ದೇಹಕ್ಕೆ ನಾಟಿಲ್ಲ.
ನೌಕರ ಕೆಳಗೆ ಬೀಳುತ್ತಿದ್ದಂತೆ ಆತ ಧರಿಸಿದ್ದ 30 ಗ್ರಾಂ ತೂಕದ ಸರವನ್ನು ಸಹ ಕಸಿದುಕೊಂಡು ಪರಾರಿಯಾಗಿದ್ದಾರೆ. ಅದೃಷ್ಟವಶಾತ್‌ ಸಾಜಿದ್‌ನ ಜೀವಕ್ಕೆ ಯಾವುದೇ ಹಾನಿಯಾಗಿಲ್ಲ.ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.