ಆನ್‌ಲೈನ್‌ ಟ್ರೇಡಿಂಗ್‌ ಹೆಸರಿನಲ್ಲಿ ವಂಚಿಸುತ್ತಿದ್ದ ನಾಲ್ವರ ಬಂಧನ
      
ಬೆಂಗಳೂರು, ಸೆ.3-ಆನ್‌ಲೈನ್‌ ಟ್ರೇಡಿಂಗ್‌ ಹೆಸರಿನಲ್ಲಿ ಹಲವರಿಗೆ ಕೋಟ್ಯಂತರ ರೂ. ವಂಚಿಸಿದ್ದ ನಾಲ್ವರು ಆರೋಪಿಗಳನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.ಶಶಿಕುಮಾರ್‌ (25), ಸಚಿನ್‌ (20), ಕಿರಣ್‌ ಎಸ್‌‍.ಕೆ. (25) ಮತ್ತು ಚರಣ್‌ರಾಜ್‌ ಬಂಧಿತ ಆರೋಪಿಗಳು.
ಇವರು ನಕಲಿ ಕಂಪೆನಿಗಳನ್ನು ಸೃಷ್ಟಿಸಿ ಅಮಾಯಕರನ್ನು ಷೇರು ಮಾರುಕಟ್ಟೆಯಲ್ಲಿ ಭಾರೀ ಲಾಭ ಬರುತ್ತದೆ ಎಂದು ಯಾಮಾರಿಸಿ ಕೋಟ್ಯಂತರ ರೂ. ಸಂಗ್ರಹಿಸಿ ವಂಚಿಸಿದ್ದರು. ಇದಲ್ಲದೆ, ನಕಲಿ ದಾಖಲೆ ನೀಡಿ ಹಲವಾರು ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಹಣ ವರ್ಗಾವಣೆಯಾದ ನಂತರ ಬೇರೆ ಬೇರೆ ಅಕೌಂಟ್‌ಗಳಿಗೆ ಅದನ್ನು ವರ್ಗಾಯಿಸುತ್ತಿದ್ದರು. ನಂತರ ಆ ಬ್ಯಾಂಕ್‌ ಖಾತೆಯನ್ನೇ ಬ್ಲಾಕ್‌ ಮಾಡುತ್ತಿದ್ದರು.
ಈ ಬಗ್ಗೆ ಬೆಂಗಳೂರಿನ ಹಲವಾರು ಸೈಬರ್‌ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಕೋಟ್ಯಂತರ ರೂ. ವಂಚನೆಯಾಗಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.