ಕತ್ತು ಕೊಯ್ದು ಮಗಳನ್ನೇ ಕೊಂದ ತಂದೆ
ದೇವನಹಳ್ಳಿ, ಅ.12- ಪ್ರೀತಿಯ ಬಲೆಗೆ ಬಿದ್ದಿದ್ದ ಮಗಳನ್ನು ತಂದೆಯೇ ಕತ್ತುಕೊಯ್ದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಕವನಾ(20) ಕೊಲೆಯಾದ ದುರ್ದೈವಿ.
ಬಿದಲೂರು ಗ್ರಾಮದ ನಿವಾಸಿ ಮಂಜುನಾಥ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ನಡುವೆ ಈ ಇಬ್ಬರೂ ಹೆಣ್ಣು ಮಕ್ಕಳು ಪ್ರೀತಿಯ ಬಲೆಗೆ ಬಿದ್ದಿದ್ದಾರೆ. ಇತ್ತೀಚೆಗೆ ಕಿರಿಯ ಮಗಳು ಪ್ರೀತಿಸಿದವನ ಜೊತೆ ಹೋಗುವುದಾಗಿ ಮನೆಯಲ್ಲಿ ಪೋಷಕರೊಂದಿಗೆ ಜಗಳವಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಪೊಲೀಸರು ಆಕೆಗೆ ಬುದ್ಧಿವಾದ ಹೇಳಿ ನಂತರ ಸಾಂತ್ವನ ಕೇಂದ್ರಕ್ಕೆ ಆಕೆಯನ್ನು ಸೇರಿಸಲಾಗಿದೆ.
ಮೊಬೈಲ್‌ನಲ್ಲಿ ಸೈರನ್ ಶಬ್ದ ಕೇಳಿ ಜನ ಶಾಕ್, ಕೇಂದ್ರ ಸರ್ಕಾರದಿಂದ ‘ ’ ಪರೀಕ್ಷೆ
ಇದೀಗ ಹಿರಿಯ ಮಗಳು ಕವನಾ ಯುವಕನೊಬ್ಬನನ್ನು ಪ್ರೀತಿಸುತ್ತಿರುವ ವಿಷಯ ಆಕೆಯ ಪೋಷಕರಿಗೆ ಗೊತ್ತಾಗಿದೆ. ಈ ಬಗ್ಗೆ ಮಗಳಿಗೆ ಪೋಷಕರು ಬುದ್ಧಿವಾದ ಹೇಳಿದರೂ ಆಕೆ ಕೇಳುತ್ತಿರಲಿಲ್ಲ. ಮಗಳ ವರ್ತನೆಯಿಂದ ಬೇಸತ್ತ ತಂದೆ ಮಂಜುನಾಥ್ ಅವರು ಮಗಳನ್ನು ಕೊಲೆ ಮಾಡಲು ನಿರ್ಧರಿಸಿ ಆಕೆ ನಿದ್ರೆಗೆ ಜಾರಿದಾಗ ಕೋಳಿಕೊಯ್ಯುವ ಚಾಕುವಿನಿಂದ ಕವನಾಳ ಕತ್ತುಕೊಯ್ದು ಕೊಲೆ ಮಾಡಿ ನಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ.
ವಿಶ್ವನಾಥಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಗಳ ವರ್ತನೆಯಿಂದ ಎಲ್ಲಿ ಮರ್ಯಾದೆ ಹೋಗುವುದೆಂದು ಭಾವಿಸಿ ತಂದೆ ಈ ಕೃತ್ಯ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.