ಬೆಂಗಳೂರಲ್ಲಿ ಇಬ್ಬರನ್ನು ಬಲಿ ಪಡೆದ ಬಿಎಂಟಿಸಿ ಬಸ್‌‍ ಮತ್ತು ವಾಟರ್‌ ಟ್ಯಾಂಕರ್‌
         
ಬೆಂಗಳೂರು, ಸೆ.18– ಬಿಎಂಟಿಸಿ ಬಸ್‌‍ ಡಿಕ್ಕಿಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಉಪ್ಪಾರಪೇಟೆ ಸಂಚಾರಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಯಶವಂತಪುರ ಡಿಪೋಗೆ ಸೇರಿದ ಬಿಎಂಟಿಸಿ ಬಸ್‌‍ ನೆಲಮಂಗಲದಿಂದ ಮೆಜೆಸ್ಟಿಕ್‌ಗೆ ಬರುತ್ತಿದ್ದಾಗ ರಾತ್ರಿ 11.45ರ ಸುಮಾರಿಗೆ ಬಿಎಂಟಿಸಿ ಬಸ್‌‍ ನಿಲ್ದಾಣ ಸರ್ವಿಸ್‌‍ ರಸ್ತೆಯ ಪ್ರವೇಶದ್ವಾರದ ಅಮರ್‌ ಜಂಕ್ಷನ್‌ ಬಳಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬಸ್‌‍ ಡಿಕ್ಕಿಹೊಡೆದ ಪರಿಣಾಮ ಅವರು ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಉಪ್ಪಾರಪೇಟೆ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಿಎಂಟಿಸಿ ಬಸ್‌‍ ಚಾಲಕ ಗೋಪಾಲ್‌ ಎಂಬುವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಾಟರ್‌ ಟ್ಯಾಂಕರ್‌ ಡಿಕ್ಕಿ-ಸ್ಕೂಟರ್‌ ಸವಾರ ಸಾವುವಾಟರ್‌ ಟ್ಯಾಂಕರ್‌ ಹಾಗೂ ಸ್ಕೂಟರ್‌ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಗಾರೆ ಕೆಲಸಗಾರ ಮೃತಪಟ್ಟಿರುವ ಘಟನೆ ಮಹದೇವಪುರ ಸಂಚಾರಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಉದಯನಗರದ ನಿವಾಸಿ ಶೇಖರ್‌ (55) ಮೃತಪಟ್ಟ ಸ್ಕೂಟರ್‌ ಸವಾರ. ಇವರು ವೃತ್ತಿಯಲ್ಲಿ ಗಾರೆ ಕೆಲಸ ಗಾರ.
ಶೇಖರ್‌ ಅವರು ಕೆಲಸ ಮುಗಿಸಿಕೊಂಡು ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ನಿನ್ನೆ ಸಂಜೆ 6.30ರ ಸುಮಾರಿನಲ್ಲಿ ಐಟಿಪಿಎಲ್‌ ಮುಖ್ಯರಸ್ತೆಯ ಹೂಡಿ ಜಂಕ್ಷನ್‌-ಸುಜುಕಿ ಶೋ ರೂಂ ಹತ್ತಿರ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ವಾಟರ್‌ ಟ್ಯಾಂಕರ್‌ ವಾಹನ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಶೇಖರ್‌ ಅವರು ಗಂಭೀರ ಗಾಯಗೊಂಡರು.
ತಕ್ಷಣ ಶೇಖರ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮಹದೇವಪುರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.