ಸಹೋದ್ಯೋಗಿಯನ್ನು ಕೊಂದ ಆರೋಪಿ ಸೆರೆ
ಬೆಂಗಳೂರು,ಡಿ.26-ಹೆಚ್ಚು ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದ ಸಹೋದ್ಯೋಗಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದ ಮಹಮ್ಮದ್ ದಿಲ್ಖುಷ್(22) ಬಂಧಿತ ಆರೋಪಿ.
ದೇವರಚಿಕ್ಕನಹಳ್ಳಿ ಮುಖ್ಯರಸ್ತೆಯಲ್ಲಿರುವ ಸಯ್ಯದ್ ಸಾಕ್ ಅಲಿಯಾಸ್ ಸಮೀರ್ ಎಂಬುವರ ಮಾಲೀಕತ್ವದ ಅಲ್ಲೈನ್ಸ್ ಫ್ಯಾಬ್ರಿಕೇಷನ್ ಅಂಗಡಿಯಲ್ಲಿ ಮೊಹಮ್ಮದ್ ದಿಲ್ಖುಷ್ ಹಾಗೂ ಗುಲಾಮ್ ಇಬ್ಬರು ಕೆಲಸ ಮಾಡಿಕೊಂಡು ರೂಮ್‍ನಲ್ಲಿ ಒಟ್ಟಿಗೆ ಮಲಗುತ್ತಿದ್ದರು. ಅಂಗಡಿಯಲ್ಲಿ ಹೆಚ್ಚು ಕೆಲಸ ಮಾಡುವಂತೆ ಗುಲಾಮ್ ಪೀಡಿಸುತ್ತಿದ್ದನು.
ಇದೇ ವಿಚಾರಕ್ಕೆ ಇವರಿಬ್ಬರ ನಡುವೆ ಜಗಳವಾಗಿದೆ. ಡಿ.17ರಂದು ಕೆಲಸ ಮುಗಿಸಿಕೊಂಡು ರೂಮ್‍ಗೆ ಬಂದು ಗುಲಾಮ್ ಮಲಗಿದ್ದಾಗ ಆರೋಪಿ ದಿಲ್‍ಕುಶ್ ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಗೋಣಿ ಚೀಲದಲ್ಲಿ ಶವವನ್ನು ಹಾಕಿ ಅಂಗಡಿ ಪಕ್ಕದಲ್ಲಿದ್ದ ರಾಜಕಾಲುವೆಗೆ ಬಿಸಾಡಿ ಪರಾರಿಯಾಗಿದ್ದನು.  ಡಿ.18ರಂದು ಬೆಳಗ್ಗೆ 9 ಗಂಟೆಯಿಂದ ಗುಲಾಮ್ ಕಾಣೆಯಾಗಿದ್ದಾನೆ ಎಂದು ತಿಳಿದು ದೂರುದಾರರು ಆತ ಕೆಲಸ ಮಾಡುತ್ತಿದ್ದ ಅಂಗಡಿ ಬಳಿ ಹೋಗಿ ಡಿ.21ರಂದು ಸಂಜೆ 6.30ರ ಸುಮಾರಿನಲ್ಲಿ ವಿಚಾರಿಸುತ್ತಿದ್ದಾಗ ಅಲ್ಲಿದ್ದ ವ್ಯಕ್ತಿಯೊಬ್ಬ ಅಂಗಡಿ ಪಕ್ಕದಲ್ಲಿದ್ದ ಪ್ಯಾಸೇಜ್‍ನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಮತ್ತೆ ಪಾರುಪತ್ಯ ಸಾಧಿಸಿದ ಬಿಎಸ್‍ವೈ
ಸಮೀಪ ಹೋಗಿ ನೋಡಿದಾಗ ಗೋಣಿಚೀಲ ಇರುವುದು ಕಂಡುಬಂದಿದೆ. ಗೋಣಿಚೀಲದ ರಂಧ್ರದಿಂದ ಗುಲಾಮ್ ಧರಿಸಿದ್ದ ಬಟ್ಟೆ ಕಂಡುಬಂದಿದೆ. ನಂತರ ಗೋಣಿಚೀಲದಲ್ಲಿದ್ದ ವ್ಯಕ್ತಿ ಗುಲಾಮ್ ಎಂದು ಖಚಿತಪಡಿಸಿಕೊಂಡು ಯಾವುದೋ ದುರದ್ದೇಶದಿಂದ ಆತನನ್ನು ಕೊಲೆ ಮಾಡಿ ಅದನ್ನು ಮರೆಮಾಚುವ ಉದ್ದೇಶದಿಂದ ಶವವನ್ನು ಗೋಣಿಚೀಲದಲ್ಲಿ ಹಾಕಿ ಅಂಗಡಿಯ ಪಕ್ಕದಲ್ಲಿರುವ ರಾಜಕಾಲುವೆ ಮತ್ತು ಅಂಗಡಿ ಮಧ್ಯದ ಪಾಸೇಜ್‍ನಲ್ಲಿ ಎಸೆದು ಹೋಗಿರುವುದು ತಿಳಿದು ಈ ಬಗ್ಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಎರಡು ಮೊಬೈಲ್‍ಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹಳೆ ದ್ವೇಷದ ಹಿನ್ನಲೆಯಲ್ಲಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುತ್ತದೆ.
ಆಗ್ನೇಯ ವಿಭಾಗದ ಉಪಪೊಲೀಸ್ ಆಯುಕ್ತರಾದ ಸಿ.ಕೆ.ಬಾಬ ಅವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಸುಧಾಕರ್ ಹಾಗೂ ಇನ್‍ಸ್ಪೆಕ್ಟರ್‍ಗಳನ್ನೊಳಗೊಂಡ ಸಿಬ್ಬಂದಿ ಘಟನೆ ನಡೆದ ಎರಡು ದಿನಗಳಲ್ಲಿ ಪ್ರಕರಣವನ್ನು ಬೇಸುವಲ್ಲಿ ಯಶಸ್ವಿಯಾಗಿದ್ದಾರೆ.