ದಂಪತಿ ನಡುವೆ ಜಗಳ, ಪತ್ನಿ ಕೊಂದು ಪತಿ ಪರಾರಿ
   ,        
ಬೆಂಗಳೂರು,ಸೆ.21– ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಕೊ ಲೇಔಟ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಬಿಟಿಎಸ್‌‍ ಲೇ ಔಟ್‌ ನಿವಾಸಿ ಸಯ್ಯದ್‌ ಸಮೀರಾ (40) ಕೊಲೆಯಾದ ಗೃಹಿಣಿ. ಆರೋಪಿ ಪತಿ ಸಯ್ಯದ್‌ ಜಮೀರ್‌ ಪರಾರಿಯಾಗಿದ್ದಾನೆ.
ಪೈಂಟಿಂಗ್‌ ಹಾಗೂ ಬ್ಯುಸಿನೆಸ್‌‍ ಮಾಡುತ್ತಿರುವ ಸಯ್ಯದ್‌ ಜಮೀರ್‌ 15 ವರ್ಷದ ಹಿಂದೆ ಸಯ್ಯದ್‌ ಸಮೀರಾ ಅವರನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಕೆಲದಿನಗಳಿಂದ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಜಗಳ ನಡೆಯುತ್ತಿತ್ತು. ರಾತ್ರಿ 11 ಗಂಟೆ ಸುಮಾರಿನಲ್ಲಿ ಪತ್ನಿ ಜೊತೆ ಜಗಳವಾಡಿದ ಸಯ್ಯದ್‌ ತಾಳೆ ಕಳೆದುಕೊಂಡು ವೇಲ್‌ನಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ವಿಷಯ ತಿಳಿದು ಸಮೀರಾ ಅವರ ಸಹೋದರ ಮೈಕೊ ಲೇ ಔಟ್‌ ಠಾಣೆಗೆ ದೂರು ನೀಡಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಸೇಂಟ್‌ಜಾನ್‌ ಆಸ್ಪತ್ರೆಗೆ ರವಾನಿಸಿ ಆರೋಪಿ ಸಯ್ಯದ್‌ ಜಮೀರ್‌ಗಾಗಿ ಶೋಧ ಕೈಗೊಂಡಿದ್ದಾರೆ.
