ಕಾನೂನು ವಿದ್ಯಾರ್ಥಿ ಧ್ರುವ್ ಆತ್ಮಹತ್ಯೆ, ಪೊಲೀಸರ ತನಿಖೆಯಲ್ಲಿ ಕಾರಣ ಬಹಿರಂಗ
ಬೆಂಗಳೂರು,ಮಾ.23-ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿ ಧ್ರುವ್ ಜತಿನ್ ಠಕ್ಕರ್ ಆತ್ಮಹತ್ಯೆಗೆ ಜಿಗುಪ್ಸೆ ಕಾರಣ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಉತ್ತಮ ವಿದ್ಯಾಭ್ಯಾಸ ಮಾಡುತ್ತಿದ್ದ ಧ್ರುವ್‍ಗೆ ಮೊದಲ ಸೆಮ್‍ನಲ್ಲಿ ಉತ್ತಮ ಅಂಕಗಳಿಸಿದ್ದನು. ಆದರೆ 2ನೇ ಸೆಮ್‍ನಲ್ಲಿ ಆತ ನಿರೀಕ್ಷಿಸಿದಷ್ಟು ಅಂಕ ಬಂದಿರಲಿಲ್ಲ. ಹಾಗಾಗಿ ಆತ ಜೀವನದಲ್ಲಿ ಜಿಗುಪ್ಸೆಗೊಂಡು ಖಿನ್ನತೆಗೆ ಒಳಗಾಗಿದ್ದ ಎಂದು ತಿಳಿದುಬಂದಿದೆ.
ಧ್ರುವ್‍ನ ಆತ್ಮೀಯ ಸ್ನೇಹಿತರಿಂದ ಇಂಚಿಂಚೂ ಮಾಹಿತಿ ಪಡೆದುಕೊಂಡಿರುವ ಪೊಲೀಸರು, ಆತ ಜೀವನದಲ್ಲಿ ಜಿಗುಪ್ಸೆಗೊಂಡು ಮೆಟ್ರೋ ರೈಲಿಗೆ ಸಿಕ್ಕಿ ಈ ರೀತಿ ಮಾಡಿಕೊಂಡನೋ ಅಥವಾ ಬೇರೇನಾದರೂ ಕಾರಣವಿರಬಹುದೇ ಎಂಬುದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ಮುಂಬೈ ಮೂಲದ ಉದ್ಯಮಿ ಪುತ್ರನಾದ ಧ್ರುವ್‍ನನ್ನು ಉತ್ತಮ ವಿದ್ಯಾಭ್ಯಾಸ ಮಾಡಲೆಂದು ನಗರದ ನ್ಯಾಷನಲ್ ಕಾನೂನು ಕಾಲೇಜಿಗೆ ದಾಖಲಿಸಿದ್ದರು. ಆದರೆ ಈಗ ಆತನ ಮೃತದೇಹವನ್ನು ಕೊಂಡೊಯ್ದು ಅಂತಿಮ ಸಂಸ್ಕಾರ ನೆರವೇರಿಸಿರುವ ಪೋಷಕರ ದುಃಖ ಹೇಳತೀರದಾಗಿದೆ.