ಹುಡುಗಿ ವಿಚಾರಕ್ಕೆ ಬಾಲ್ಯ ಸ್ನೇಹಿತನನ್ನೇ ಕೊಂದಿದ್ದ ಹಂತಕನ ಬಂಧನ
          
ಬೆಂಗಳೂರು, ಸೆ.24-ಹುಡುಗಿ ವಿಚಾರಕ್ಕೆ ಜಗಳ ನಡೆದು ಬಾಲ್ಯ ಸ್ನೇಹಿತನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಸಂಜಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಗೆದ್ದಲಹಳ್ಳಿಯಲ್ಲಿ ಸ್ನೇಹಿತ ವರುಣ್‌ ಕೋಟ್ಯಾನ್‌ ಜೊತೆ ವಾಸವಾಗಿದ್ದ ದಿವೇಶ್‌ ಹೆಗ್ಡೆ(24) ಬಂಧಿತ ಆರೋಪಿ. ಈತ ಕೋರಮಂಗಲದ ಜೊಮೊಟೋ ದಲ್ಲಿ ಕೆಲಸ ಮಾಡುತ್ತಿದ್ದಾನೆ.ಬಾಗಲೂರಿನ ಕಂಪನಿಯೊಂದರಲ್ಲಿ ಸೇಫ್ಟಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ಸ್ನೇಹಿತ ವರುಣ್‌ ಗೆದ್ದಲಹಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದನು.
ವರುಣ್‌, ದಿವೇಶ್‌ ಮತ್ತು ಫ್ಯಾಷನ್‌ ಡಿಸೈನರ್‌ ಆಗಿರುವ ಯುವತಿ ಬಾಲ್ಯ ಸ್ನೇಹಿತರಾಗಿದ್ದು, ಇವರೆಲ್ಲರೂ ಉಡುಪಿ ಮೂಲದವರು. ಮತ್ತೊಬ್ಬ ಸ್ನೇಹಿತ ದೀಕ್ಷಿತ್‌ ಇವರೆಲ್ಲರಿಗೂ ಪರಿಚಯವಾಗಿದ್ದು, ಆಗಾಗ್ಗೆ ಒಟ್ಟಾಗಿ ವರುಣ್‌ ಮನೆಗೆ ಬಂದು ಹೋಗುತ್ತಿದ್ದರು. ಭಾನುವಾರ ವರುಣ್‌ ಹುಟ್ಟುಹಬ್ಬದ ನಿಮಿತ್ತ ಈ ನಾಲ್ಕೂ ಮಂದಿ ಇವರ ಮನೆಯಲ್ಲಿ ಸೇರಿದ್ದಾರೆ.ಅಂದು ರಾತ್ರಿ ಸ್ನೇಹಿತರೆಲ್ಲಾ ಎರಡು ಬೈಕ್‌ಗಳಲ್ಲಿ ಕೋರಮಂಗಲದ ಕ್ಲಬ್‌ಗೆ ಹೋಗಿ ಪಾರ್ಟಿ ಮಾಡಿಕೊಂಡು ವಾಪಸ್‌‍ ವರುಣ್‌ ಮನೆಗೆ ಬಂದಿದ್ದಾರೆ.
ಮತ್ತೆ ಅಂದು ಮುಂಜಾನೆ 4.30ರ ಸುಮಾರಿನಲ್ಲಿ ನಾಲ್ವರು ಎರಡು ಬೈಕ್‌ಗಳಲ್ಲಿ ದೇವನಹಳ್ಳಿ ಕಡೆ ಜಾಲಿರೈಡ್‌ ಹೋಗಿ ವಾಪಸ್‌‍ ಮನೆಗೆ ಬಂದ ಸಂದರ್ಭದಲ್ಲಿ ವರುಣ್‌ ರೂಂನಲ್ಲಿ ಬಾಲ್ಯ ಸ್ನೇಹಿತೆ ಮಲಗಿದ್ದಾಳೆ. ದೀಕ್ಷಿತ್‌ ತನ್ನ ಮನೆಗೆ ಹೋಗಿದ್ದಾನೆ.
ಮನೆಯ ಟೆರೇಸ್‌‍ ಮೇಲೆ ವರುಣ್‌, ದಿವೇಶ್‌ ಮಾತನಾಡುತ್ತಾ ಕುಳಿತಿದ್ದರು. ಈ ಬಾಲ್ಯ ಸ್ನೇಹಿತೆಯನ್ನು ಇವರಿಬ್ಬರೂ ಪ್ರೀತಿಸುತ್ತಿದ್ದರು. ಈ ವಿಷಯ ಆಕೆಗೆ ಗೊತ್ತಿಲ್ಲ. ಇದೇ ವಿಚಾರಕ್ಕೆ ವರುಣ್‌ ಮತ್ತು ದಿವೇಶ್‌ ನಡುವೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ದಿವೇಶ್‌ ಹಲ್ಲೆಗೆ ಮುಂದಾದಾಗ ವರುಣ್‌ ಅಲ್ಲಿಂದ ಓಡಿದ್ದಾನೆ. ಆತನನ್ನು ಸ್ವಲ್ಪದೂರ ಅಟ್ಟಾಡಿಸಿಕೊಂಡು ಹೋಗಿ ವಾಟರ್‌ಟ್ಯಾಂಕ್‌ ಬಳಿ ಮತ್ತೆ ಜಗಳವಾಡುತ್ತಿದ್ದಾಗ ದಾರಿಹೋಕರು ಅವರಿಗೆ ಬೈದು ಕಳುಹಿಸಿದ್ದಾರೆ.
ವಾಪಸ್‌‍ ಇವರಿಬ್ಬರೂ ಮನೆ ಬಳಿ ಬಂದಾಗ ಮತ್ತೆ ಜಗಳವಾಗಿದೆ. ಆ ವೇಳೆ ದಿವೇಶ್‌ ತಳ್ಳಿದಾಗ ಕುಸಿದು ಬಿದ್ದ ವರುಣ್‌ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.ನಂತರ ರೂಂನಲ್ಲಿ ಮಲಗಿದ್ದ ಬಾಲ್ಯ ಸ್ನೇಹಿತೆಯನ್ನು ಎಬ್ಬಿಸಿ ಮನೆಗೆ ಹೋಗುವಂತೆ ಹೇಳಿ ಕಳುಹಿಸಿ, ಇತ್ತ ದಿವೇಶ್‌ ಪರಾರಿಯಾಗಿದ್ದನು.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಇದೀಗ ಆರೋಪಿ ದಿವೇಶ್‌ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.