ಕುಡಿದು ಬಂದು ಕಿರಿಕ್, ಬಿಹಾರಿ ಯುವಕನ ಕತ್ತು ಹಿಸುಕಿ ಕೊಲೆ
    
ಬೆಂಗಳೂರು, ಅ.4-ಈ ಹಿಂದೆ ಕೆಲಸ ಮಾಡುತ್ತಿದ್ದ ಪ್ಲೈವುಡ್‌ ಅಂಗಡಿ ಬಳಿ ಕುಡಿದು ಬಂದು ಕೆಲಸಗಾರರ ಜೊತೆ ಜಗಳವಾಡಿದ ಬಿಹಾರಿ ಮೂಲದ ಯುವಕನ ಮೇಲೆ ಹಲ್ಲೆ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮೈಕೋಲೇಔಟ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಸುಜಿತ್‌ (22)ಕೊಲೆಯಾದ ಬಿಹಾರಿ ಮೂಲದ ಯುವಕ. ಪರಾರಿಯಾಗಿರುವ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.ಬಿಳೇಕಲ್ಲಹಳ್ಳಿಯಲ್ಲಿರುವ ಪ್ಲೈವುಡ್‌ ಅಂಗಡಿಯಲ್ಲಿ ಸುಜಿತ್‌ ಈ ಹಿಂದೆ ಕೆಲಸ ಮಾಡುತ್ತಿದ್ದನು. ಕೆಲಸದ ವೇಳೆ ಮದ್ಯಪಾನ ಮಾಡಿ ಬರುತ್ತಿದ್ದರಿಂದ ಮಾಲೀಕರು ಆತನನ್ನು ಕೆಲಸದಿಂದ ತೆಗೆದಿದ್ದರು. ಹಾಗಾಗಿ ಸುಜಿತ್‌ ಬೇರೆಕಡೆ ಕೆಲಸಮಾಡುತ್ತಿದ್ದ.
ಈ ಪ್ಲೈವುಡ್‌ ಅಂಗಡಿಯಲ್ಲಿ ನಿನ್ನೆ ನಾಲ್ವರು ಕೆಲಸಗಾರರು ಮರಗೆಲಸ ಮಾಡುತ್ತಿದ್ದರು ರಾತ್ರಿ 8ಗಂಟೆ ಸುಮಾರಿನಲ್ಲಿ ಇಬ್ಬರು ಕೆಲಸಗಾರರು ಹೊರಗೆ ಹೋಗಿದ್ದರು. ಆ ಸಂದರ್ಭದಲ್ಲಿ ಸುಜಿತ್‌ ಪ್ಲೈವುಡ್‌ ಅಂಗಡಿ ಬಳಿ ಕುಡಿದು ಬಂದು ಇಬ್ಬರು ಕೆಲಸಗಾರರ ಜೊತೆ ಜಗಳವಾಡಿದ್ದಾನೆ. ಮಾತಿಗೆಮಾತು ಬೆಳೆದು ವಿಕೋಪಕ್ಕೆ ಹೋದಾಗ ರಿಪೀಸ್‌‍ ಪಟ್ಟಿಯಿಂದ ಕೆಲಸಗಾರರು ಸುಜಿತ್‌ ತಲೆಗೆ ಹೊಡೆದು, ಕುತ್ತಿಗೆ ಹಿಸುಕಿದಾಗ ಉಸಿರುಗಟ್ಟಿ ಸುಜಿತ್‌ ಮೃತಪಟ್ಟಿದ್ದಾನೆ.
ಇದರಿಂದ ಗಾಬರಿಯಾದ ಇಬ್ಬರು ಕೆಲಸಗಾರರು ಸ್ಥಳದಿಂದ ಪರಾರಿಯಾಗಿದ್ದಾರೆ. ಕೆಲ ಸಮಯದ ಬಳಿಕ ಹೊರಗೆ ಹೋಗಿದ್ದ ಇನ್ನಿಬ್ಬರು ಕೆಲಸಗಾರರು ಅಂಗಡಿಗೆ ಬಂದಾಗ ಸುಜಿತ್‌ ಕೊಲೆಯಾಗಿರುವುದು ಗಮನಿಸಿ, ಮಾಲೀಕರಿಗೆ ತಿಳಿಸಿದ್ದಾರೆ.
ಮಾಲೀಕರು ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಸೆಂಟ್‌ಜಾನ್‌ ಆಸ್ಪತ್ರೆಗೆ ರವಾನಿಸಿ ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.