ಬಿಬಿಎಂಪಿ ಚುನಾವಣೆಗೆ ಸರ್ಕಾರ ಸಮ್ಮತಿ, 5 ಭಾಗಗಳಾಗುವುದೇ ಬೆಂಗಳೂರು.. ?
ಬೆಂಗಳೂರು,ಜೂ.11-ಅಂತೂ ಇಂತೂ ಬಿಬಿಎಂಪಿಗೆ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಚುನಾವಣೆ ನಡೆಯದಿರುವ ಬಿಬಿಎಂಪಿಗೆ ಬರುವ ಡಿಸಂಬರ್‌ ಒಳಗೆ ಚುನಾವಣೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ಸಂಜೆ ನಗರದ ಕಾಂಗ್ರೆಸ್‌‍ ಶಾಸಕರು ಹಾಗೂ ಮುಖಂಡರುಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಲವರು ಹಾಲಿ ಇರುವ 225 ವಾರ್ಡ್‌ಗಳ ಬದಲಿಗೆ ಬಿಬಿಎಂಪಿಯನ್ನುಐದು ಭಾಗಗಳನ್ನಾಗಿ ವಿಭಜನೆ ಮಾಡಿ ಚುನಾವಣೆ ನಡೆಸುವಂತೆ ಸಲಹೆ ನೀಡಿದರು ಎನ್ನಲಾಗಿದೆ.
ಈಗಾಗಲೇ ಬಿಬಿಎಂಪಿ ಚುನಾವಣೆ ವಿಳಂಭವಾಗಿರುವುದರಿಂದ ಐದು ಭಾಗಗಳನ್ನಾಗಿ ವಿಭಜಿಸಲು ನ್ಯಾಯಾಲಯ ಒಪ್ಪುವುದೇ ಎಂದು ಪ್ರಶ್ನಿಸಿದ ಸಿಎಂ ಅವರು ನೀವು ನ್ಯಾಯಲಯಕ್ಕೆ ಐದು ವಿಭಾಗಗಳನ್ನಾಗಿ ವಿಭಜಿಸುವ ಬಗ್ಗೆ ಮಾಹಿತಿ ನೀಡಿ ಒಂದು ವೇಳೆ ಕೋರ್ಟ್‌ ಅದಕ್ಕೆ ಸಮತಿ ನೀಡಿದರೆ ಅದೇ ರೀತಿ ಚುನಾವಣೆ ಮಾಡೋಣ ಒಂದು ವೇಳೆ 225 ವಾರ್ಡ್‌ಗಳಿಗೆ ಚುನಾವಣೆ ಮಾಡಿ ಎಂದರೆ ಅದರಂತೆ ಚುನಾವಣೆ ನಡೆಸಲು ಸನ್ನದ್ಧರಾಗಿ ಎಂದು ಸೂಚನೆ ನೀಡಿದರು ಎಂದು ತಿಳಿದುಬಂದಿದೆ.
ಬಿಬಿಎಂಪಿ ಐದು ಭಾಗ ಹೇಗೆ? ಮಾನದಂಡ ಏನು?ಆಡಳಿತಾತಕ ದೃಷ್ಟಿಯಿಂದ ಬಿಬಿಎಂಪಿ ವಿಭಜನೆ ಚುನಾವಣೆ ಮಾಡುವುದು ಸೂಕ್ತ ಎಂದು ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಬಿ.ಎಸ್‌‍. ಪಾಟೀ ಲ್‌ ನೇತತ್ವದ ಸಮಿತಿ ವರದಿ ನೀಡಿದೆ. ಬಿಬಿಎಂಪಿಯಲ್ಲಿ ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೆ ತರವಂತೆಯೂ ಸಲಹೆ ನೀಡಿದ್ದ ಸಮಿತಿ ಬೆಂಗಳೂರು ಸುತ್ತಲಿನ ಹಲವು ಪ್ರದೇಶಗಳನ್ನು ಬಿಬಿಎಂಪಿಗೆ ಸೇರ್ಪಡೆ ಮಾಡಿಕೊಂಡು 400 ವಾರ್ಡ್‌ಗಳನ್ನು ರಚಿಸುವಂತೆ ಶಿಫಾರಸು ಮಾಡಿತ್ತು.
ಬೆಂಗಳೂರು ಕೇಂದ್ರ, ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಎಂಬ ಐದು ಪಾಲಿಕೆಗಳನ್ನು ರಚಿಸುವಂತೆ ಸಲಹೆ ನೀಡಿ ಐದು ಪಾಲಿಕೆಗಳ ಉಸ್ತುವಾರಿಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ನೀಡುವಂತೆಯೂ ಸಲಹೆ ನೀಡಲಾಗಿತ್ತು.ನೆಲಮಂಗಲ, ಹೊಸಕೋಟೆ, ಬಿಡದಿ, ರಾಮನಗರ, ಕನಕಪುರ, ದೇವನಹಳ್ಳಿ ಸೇರಿದಂತೆ ಬೆಂಗಳೂರು ಗ್ರಾಮಾಂತರದ ಹಲವು ಜಿಲ್ಲೆಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆಯೂ ಸಲಹೆ ನೀಡಲಾಗಿತ್ತು.
ಹೀಗಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಐದು ಪಾಲಿಕೆ ಮಾಡಿ ಚುನಾವಣೆ ನಡೆಸಿದರೆ ತಾವು ಪ್ರತಿನಿಧಿಸುವ ಕನಕಪುರವನ್ನು ಬೆಂಗಳೂರು ವ್ಯಾಪ್ತಿಗೆ ಸೇರ್ಪಡೆ ಮಾಡಬಹುದು ಎಂಬ ಉದ್ದೇಶದಿಂದ ಬೆಂಗಳೂರನ್ನು ವಿಭಜನೆ ಮಾಡಿ ಚುನಾವಣೆ ನಡೆಸಲು ಉತ್ಸುಕರಾಗಿದ್ದರು. ಮಾತ್ರವಲ್ಲ ಸಮಿತಿಯಲ್ಲಿದ್ದ ಬಿ.ಎಸ್‌‍.ಪಾಟೀಲ್‌, ಸಿದ್ದಯ್ಯ ಮತ್ತಿತರ ಜೊತೆ ಮಾತುಕತೆ ನಡೆಸಿದ್ದರು ಎಂದು ಈ ಹಿಂದೆ ವರದಿಯಾಗಿತ್ತು.
ಬೇಗ ಚುನಾವಣೆ ನಡೆಸುವುದು ಸೂಕ್ತ:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷದ ಸೋಲಿಗೆ ಕಾರ್ಪೋರೇಟರ್‌ಗಳು ಇಲ್ಲದಿರುವುದು ಒಂದು ಕಾರಣ. ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿಗೆ ಚುನಾವಣೆ ನಡೆದಿರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ಚುನಾವಣೆ ನಡೆಸಬಹುದು ಎಂದು ಜನ ಭಾವಿಸಿದ್ದರೂ ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಜನ ಭ್ರಮನಿರಶನಗೊಂಡಿದ್ದಾರೆ ಈಗಲೂ ಕಾಲ ಮಿಂಚಿಲ್ಲ ಕೂಡಲೇ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ಕೆಲವರು ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು ಎಂದು ತಿಳಿದುಬಂದಿದೆ.
ಕೋರ್ಟ್‌ ಮೆಟ್ಟಿಲೇರಲು ತೀರ್ಮಾನ:ಬಿಜೆಪಿ ಸರ್ಕಾರವಿದ್ದಾಗ ಬಿಬಿಎಂಪಿ ಚುನಾವಣೆ ನಡೆಸುವಂತೆ ಕಾಂಗ್ರೆಸ್‌‍ ಪಕ್ಷದ ಕೆಲ ಮುಖಂಡರು ನ್ಯಾಯಲಯದ ಮೆಟ್ಟಿಲು ಏರಿದ್ದರು. ಅವರ ಪ್ರಯತ್ನಕ್ಕೆ ಯಶಸ್ಸು ಸಿಕ್ಕರೂ ಚುನಾವಣೆ ನಡೆದಿರಲಿಲ್ಲ. ಇದೀಗ ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಸ್ಥಿತ್ವಕ್ಕೆ ಬಂದಿರುವುದರಿಂದ ಈಗ ಬಿಜೆಪಿಯವರು ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸುವಂತೆ ನ್ಯಾಯಲಯದ ಮೆಟ್ಟಿಲೇರಲು ತೀರ್ಮಾನಿಸಿದಾರೆ ಎಂದು ಗೊತ್ತಾಗಿದೆ.