ಕ್ರೇನ್‌ ಡಿಕ್ಕಿ ಹೊಡೆದು ಆಟೋ ಚಾಲಕ ದುರ್ಮರಣ
ಬೆಂಗಳೂರು, ಜೂ.20-ರಸ್ತೆ ಬದಿ ಆಟೋ ನಿಲ್ಲಿಸಿಕೊಂಡು ಒಳಗೆ ಕುಳಿತಿದ್ದಾಗ ಹಿಂದಿನಿಂದ ಕ್ರೇನ್‌ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮೃತಪಟ್ಟಿರುವ ಘಟನೆ ಉಪ್ಪಾರಪೇಟೆ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಹೇರೋಹಳ್ಳಿಯ ನಾಗರಹೊಳೆ ಸರ್ಕಲ್‌ ನಿವಾಸಿ ವಿನೋದ್‌ಕುಮಾರ್‌(35) ಮೃತಪಟ್ಟ ಆಟೋ ಚಾಲಕ ರಾತ್ರಿ ಬಾಡಿಗೆಗೆಂದು ವಿನೋದ್‌ ಕುಮಾರ್‌ ಆಟೋ ತೆಗೆದುಕೊಂಡು ಹೋಗಿದ್ದು, ಶೇಷಾದ್ರಿ ರಸ್ತೆಯ ಗಾಂಧಿ ಪಾರ್ಕ್‌ ಬಳಿ ಇಂದು ಬೆಳಗ್ಗೆ 6.50ರ ಸುಮಾರಿನಲ್ಲಿ ಸ್ನೇಹಿತರೊಂದಿಗೆ ಟೀ ಕುಡಿದಿದ್ದು, ಅವರು ಹೋದ ಬಳಿಕ ಆಟೋದಲ್ಲೇ ಕುಳಿತಿದ್ದರು.
ಆ ಸಂದರ್ಭದಲ್ಲಿ ಇದೇ ಮಾರ್ಗವಾಗಿ ವೇಗವಾಗಿ ಬಂದ ಕ್ರೇನ್‌ ಹಿಂದಿನಿಂದ ಆಟೋಗೆ ಡಿಕ್ಕಿ ಹೊಡೆದುಕೊಂಡು ಸುಮಾರು 30 ಅಡಿ ದೂರಕ್ಕೆ ಎಳೆದೊಯ್ದಾಗ ಆಟೋದಿಂದ ವಿನೋದ್‌ ಕುಮಾರ್‌ ಕೆಳಗೆ ಬಿದ್ದಿದ್ದಾರೆ. ಆ ವೇಳೆ ಕ್ರೇನ್‌ ಚಕ್ರ ಅವರ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಉಪ್ಪಾರಪೇಟೆ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.