ಬೆಂಗಳೂರಲ್ಲಿ ದೊಣ್ಣೆಯಿಂದ ಹೊಡೆದು ನೇಪಾಳ ಮೂಲದ ವ್ಯಕ್ತಿ ಕೊಲೆ
ಬೆಂಗಳೂರು,ಜು.8-ನೇಪಾಳ ಮೂಲದ ವ್ಯಕ್ತಿಯೊಂದಿಗೆ ಜಗಳವಾಡಿದ ಆರೋಪಿಗಳು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕೋಣನಕುಂಟೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಾಜಿ(43) ಕೊಲೆಯಾದ ನೇಪಾಳ ಮೂಲದ ವ್ಯಕ್ತಿ. ಈತನ ತಂದೆತಾಯಿ ನೇಪಾಳದಲ್ಲಿ ನೆಲೆಸಿದ್ದಾರೆ. ಈತ ನಗರದಲ್ಲಿ ವಾಸವಾಗಿದ್ದುಕೊಂಡು ವೆಲ್ಡಿಂಗ್‌ ಹಾಗೂ ಕೂಲಿ ಕೆಲಸ ಮಾಡಿಕೊಂಡು ಮನೆಗೆ ಹೋಗದೆ, ರಾತ್ರಿ ವೇಳೆ ಎಲ್ಲೆಂದರಲ್ಲಿ ಮಲಗುತ್ತಿದ್ದನು.
ರಾತ್ರಿ 11.30ರ ಸುಮಾರಿನಲ್ಲಿ ಬಾಲಾಜಿ ಕೋಣನಕುಂಟೆಯ ಸಮುದಾಯ ಭವನದ ಬಳಿ ಬಂದಾಗ ಬೇರೆಯವರೊಂದಿಗೆ ಜಗಳವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ ಬಾಲಾಜಿಗೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಕಂಟ್ರೋಲ್‌ ರೂಮ್‌ಗೆ ಕರೆಯೊಂದು ಬಂದಿದ್ದು, ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಾಗ ಬಾಲಾಜಿ ರಕ್ತದ ಮಡುವಿನಲ್ಲಿ ತಲೆಗೆ ಪೆಟ್ಟಾಗಿ ಬಿದ್ದಿರುವುದು ಕಂಡು ತಕ್ಷಣ ನಿಮ್ಹಾನ್‌್ಸ ಆಸ್ಪತ್ರೆಗೆ ಕರೆದೊಯ್ಯಿದ್ದಾರೆ.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಇಂದು ಬೆಳಗಿನವ ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಣನಕುಂಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆಬೀಸಿದ್ದಾರೆ.