ಬೆಂಗಳೂರಲ್ಲಿ ಏರ್‌ಪೋರ್ಟ್‌ಗೆ ಹೋಗುವವರಿಗೆ ಮಹತ್ವದ ಮಾಹಿತಿ
ಬೆಂಗಳೂರು, ಜು.11-ಹೆಬ್ಬಾಳ ಫ್ಲೈಓವರ್‌ ಬೆಂಗಳೂರು – ಬಳ್ಳಾರಿ ರಸ್ತೆಯಲ್ಲಿದ್ದು ಬಿಡಿಎ ವತಿಯಿಂದ ಫ್ಲೈಓವರ್‌ ಅಗಲೀಕರಣ ಮತ್ತು ಬಿಎಂಆರ್‌ಸಿಎಲ್‌ ಮೆಟ್ರೋ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಏರ್‌ಪೋರ್ಟ್‌ಗೆ ಸಂಚರಿಸುವ ವಾಹನಗಳು ನಿಗದಿ ಅವಧಿಗಿಂತ ಎರಡು ಗಂಟೆ ಮುಂಚಿತವಾಗಿ ಪ್ರಯಾಣ ಪ್ರಾರಂಭಿಸುವುದು ಒಳಿತು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಪೀಕ್‌ ಅವರ್‌ರ‍ಸ ನಲ್ಲಿ ಸಂಚಾರ ನಿಧಾನಗತಿಯಲ್ಲಿರುತ್ತದೆ. ಹಾಗಾಗಿ ಏರ್‌ಪೋರ್ಟ್‌ಗೆ ಸಂಚರಿಸುವ ವಾಹನಗಳು ನಿಗಧಿತ ಅವಧಿಗೆ ಏರ್‌ಪೋರ್ಟ್‌ ತಲುಪಲು ಸಾಧ್ಯವಾಗುವುದಿಲ್ಲ. ಹಾಗಾಗಿ ಎರಡು ಗಂಟೆ ಮುಂಚಿತವಾಗಿ ಪ್ರಯಾಣಿಸಲು ಕೋರಲಾಗಿದೆ.
ವಿಮಾನ ನಿಲ್ದಾಣ ಮತ್ತು ಹೊರಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಬೆಂಗಳೂರು- ಬಳ್ಳಾರಿ ರಸ್ತೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಪ್ರತಿ ದಿನ 2.5 ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸುವುದರಿಂದ ನಿಗಧಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹೆಬ್ಬಾಳ ಪ್ಲೈಓವರ್‌ ಮೇಲೆ ವಾಹನ ಸಂಚಾರದಿಂದ ದಟ್ಟಣೆ ಉಂಟಾಗುತ್ತದೆ.
ಸಂಚಾರ ದಟ್ಟಣೆಯನ್ನು ನಿವಾರಿಸಲು ವಿವಿಧ ಪೌರ ಸಂಸ್ಥೆಗಳಿಂದ ಪ್ಲೈಓವರ್‌ ಅಗಲೀಕರಣ ಹಾಗೂ ಬಿಎಂಆರ್‌ಸಿಎಲ್‌ ನಿಂದ ಮೆಟ್ರೋ ಕಾಮಗಾರಿಗಳು ಪ್ರಗತಿಯಲ್ಲಿವೆ.ಕೆಆರ್‌ ಪುರಂ ಅಪ್‌ರ್ಯಾಂಪ್‌ನಿಂದ ಹೆಬ್ಬಾಳ ಫ್ಲೈಓವರ್‌ ಕಡೆಗೆ ಬಿಡಿಎ ವತಿಯಿಂದ ಫ್ಲೈಓವರ್‌ ಅಗಲೀಕರಣ, ಕೆಆರ್‌ಪುರಂ ನಿಂದ ಹೆಬ್ಬಾಳ ಜಂಕ್ಷನ್‌ ಕಡೆಗೆ ಬಿಎಂಆರ್‌ಸಿಎಲ್‌ ಮೆಟ್ರೋ ಕಾಮಗಾರಿ, ಕೊಡಿಗೇಹಳ್ಳಿ ಜಂಕ್ಷನ್‌, ಬ್ಯಾಟರಾಯನಪುರ ಜಂಕ್ಷನ್‌ ನಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದರೆ, ಹೆಬ್ಬಾಳ ಪಿಎಸ್‌‍ ಜಂಕ್ಷನ್‌ನಲ್ಲಿ ಬಿಡಿಎ ವತಿಯಿಂದ ಹೆಚ್ಚುವರಿ ಫ್ಲೈಓವರ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಏರ್‌ಪೋರ್ಟ್‌ಗೆ ಬದಲಿ ಮಾರ್ಗ:ಹೊರ ಒತ್ತಡ ರಸ್ತೆಯಲ್ಲಿ ಬಲ ತಿರುವು ಪಡೆದು ಹೆಳ್ಳೂರು ಕ್ರಾಸ್‌‍- ಬಾಗಲೂರು ರಸ್ತೆಯ ಏರ್‌ಪೋರ್ಟ್‌ ಪರ್ಯಾಯ ರಸ್ತೆ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗುವುದು.  ಹೊರ ವರ್ತುಲ ರಸ್ತೆಯಲ್ಲಿ ನಾಗವಾರ ಜಂಕ್ಷನ್‌ ಬಳಿ ಬಲ ತಿರುವು ಪಡೆದು ಥಣಿಸಂದ್ರ- ಹೆಗಡೆನಗರ ಮುಖ್ಯರಸ್ತೆ, ಬೆಳ್ಳಳ್ಳಿ ಸೇತುವೆ- ರೇವಾ ಜಂಕ್ಷನ್‌ ಮೂಲಕ ಬಲ ತಿರುವು ಪಡೆದು ಬಾಗಲೂರು ರಸ್ತೆಯ ಏರ್‌ಪೋರ್ಟ್‌ ಪರ್ಯಾಯ ರಸ್ತೆ ಮೂಲಕ ವಿಮಾನ ನಿಲ್ದಾಣಕ್ಕೆ ಸಂಚರಿಸುವುದು.
ಕೆಆರ್‌ ಪುರಂನಿಂದ ನಗರಕ್ಕೆ ಬರುವ ವಾಹನಗಳ ಮಾರ್ಗ:ಹೊರ ವರ್ತುಲ ರಸ್ತೆಯ ಮೂಲಕ ಚಲಿಸುವ ವಾಹನಗಳು ಐಓಸಿ- ಮುಕುಂದ ಥಿಯೇಟರ್‌ ರಸ್ತೆಯ ಲಿಂಗರಾಜಪುರಂ ಮೇಲ್ಸೇತುವೆ ಮಾರ್ಗ ಮೂಲಕ ನಗರದ ಕಡೆಗೆ ಪ್ರವೇಶಿಸಬಹುದಾಗಿದೆ.ನಾಗವಾರ ಮತ್ತು ಟ್ಯಾನರಿ ರಸ್ತೆ ಮಾರ್ಗವಾಗಿ ನಗರದ ಕಡೆಗೆ ಪ್ರವೇಶ ಮಾಡಬಹುದು.
ಸರಕು- ಸಾಗಣೆ ವಾಹನಗಳ ಮಾರ್ಗ:ಬೆಂಗಳೂರು- ಬಳ್ಳಾರಿ ರಸ್ತೆಯಿಂದ ನಗರದ ಕಡೆಗೆ ಬರುವ ಭಾರಿ ಮತ್ತು ಮಧ್ಯಮ ಗಾತ್ರದ ಸರಕು ಸಾಗಾಣಿಕೆ ವಾಹನಗಳು ದೇವನಹಳ್ಳಿಯ ರಾಣಿ ಕ್ರಾಸ್‌‍ ಬಳಿ ಎಡತಿರುವು ಪಡೆದು ಹೊಸಕೋಟೆ- ಕೋಲಾರ ಕಡೆಗೆ ಚಲಿಸುವುದು.
ದೇವನಹಳ್ಳಿಯ ದೊಡ್ಡ ಬಳ್ಳಾಪುರ ಕ್ರಾಸ್‌‍ ಬಳಿ ಎಡತಿರುವು ಪಡೆದು ಸಂಚರಿಸುವುದು. ವಿದ್ಯಾನಗರ ಕ್ರಾಸ್‌‍ ಬಳಿ ಎಡ ತಿರುವು ಪಡೆದು ರಜಾಕ್‌ ಪಾಳ್ಯ- ಬಾಗಲೂರು ಮೂಲಕ ಹೆಣ್ಣೂರು- ಕೆ.ಆರ್‌. ಪುರ ಮಾರ್ಗವಾಗಿ ನಗರದ ಕಡೆಗೆ ಚಲಿಸುವುದು.ದೊಡ್ಡ ಬಳ್ಳಾಪುರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳು ರಾಜಾನುಕುಂಟೆ ಬಳಿ ಬಲ ತಿರುವು ಪಡೆದು ನೆಲಮಂಗಲದ ಕಡೆಗೆ ಚಲಿಸುವುದು.