ಬೆಂಗಳೂರು : ರೈಲಿಗೆ ಸಿಲುಕಿ ದಂಪತಿ ಸಾವು
ಬೆಂಗಳೂರು, ಜು.13-ರೈಲ್ವೆ ಹಳಿ ಬಳಿ ಮೇಕೆ ಮೇಯಿಸುತ್ತಿ ದ್ದಾಗ ರೈಲು ಬರುತ್ತಿರುವುದು ಗಮನಿಸದೇ ಹಳಿ ಮೇಲೆ ನಿಂತಿದ್ದ ಪತಿಯ ರಕ್ಷಣೆಗೆ ಬಂದ ಪತ್ನಿಯೂ ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ನಡೆದಿದೆ.
ಪೀಕಾ ನಾಯಕ್ ಅಲಿಯಾಸ್ ಚಂದ್ರನಾಯಕ್(56) ಮತ್ತು ಜಯಬಾಯಿ(45) ಮೃತಪಟ್ಟ ದಂಪತಿ.ದೊಡ್ಡಬಳ್ಳಾಪುರದ ಕೆಳಗಿನ ನಾಯಕರಂಡಹಳ್ಳಿ ನಿವಾಸಿಗಳಾದ ದಂಪತಿ ನಿನ್ನೆ ಸಂಜೆ 3.40ರ ಸುಮಾರಿನಲ್ಲಿ ವಡ್ಡರಹಳ್ಳಿ- ಮಾಕಳಿ ದುರ್ಗ ರೈಲ್ವೆ ನಿಲ್ದಾಣಗಳ ಮಧ್ಯೆ ಇರುವ ತಮ ಜಮೀನಿನ ಬಳಿಯ ರೈಲ್ವೆ ಹಳಿ ಬಳಿ ಮೇಕೆಗಳನ್ನು ಮೇಯಿಸುತ್ತಿದ್ದರು.
ಆ ವೇಳೆ ಪೀಕಾ ನಾಯಕ್ ರೈಲ್ವೆ ಹಳಿ ಮೇಲೆ ನಿಂತಿದ್ದರು. ರೈಲು ಬರುತ್ತಿರುವುದನ್ನು ಗಮನಿಸಿದ ಪತ್ನಿ ಜಯಬಾಯಿ ರಕ್ಷಣೆಗೆ ಹೋದಾಗ ರೈಲು ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಯಶವಂತಪುರ ರೈಲ್ವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.