ಡಬಲ್ ಡೆಕ್ಕರ್ ಮೇಲ್ಸೇತುವೆ ಪ್ರಯಾಣ ಸುಗಮ-ಸುಲಲಿತ: ದಯಾನಂದ
ಬೆಂಗಳೂರು,ಜು.22- ನಗರದ ಡಬಲ್ ಡೆಕ್ಕರ್ ಮೇಲ್ಸೇತುವೆ ಮೇಲೆ ಬುಲೆಟ್ ರೈಡ್ ಮಾಡಿದ ನಗರ ಪೆÇಲೀಸ್ ಆಯುಕ್ತ ಬಿ.ದಯಾನಂದ ಅವರು, ಅತ್ಯಂತ ಸುಗಮ ಹಾಗೂ ಸುಲಲಿತ ಪ್ರಯಾಣ ಎಂದು ಬಣ್ಣಿಸಿದ್ದಾರೆ.ದಕ್ಷಿಣ ಭಾರತದಲ್ಲೇ ಮೊಟ್ಟಮೊದಲ ಡಬಲ್ ಡೆಕ್ಕರ್ ಮೇಲ್ಸೇತುವೆ ಲೋಕಾರ್ಪಣೆಗೊಂಡಿದ್ದು, ನಿನ್ನೆ ಬೆಳಗ್ಗೆ ರಾಗಿಗುಡ್ಡದಿಂದ ಸಿಲ್ಕ್‍ಬೋರ್ಡ್‍ವರೆಗೆ ಆಯುಕ್ತರು ರಾಯಲ್ ಎನ್‍ಫೀಲ್ಡ್ ಬೈಕ್ ಚಲಾಯಿಸಿ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ವಾರವಷ್ಟೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಗಿಗುಡ್ಡ ಮೆಟ್ರೋ ನಿಲ್ದಾಣದ ಬಳಿ ಡಬಲ್ ಡೆಕ್ಕರ್ -ಮೇಲ್ಸೇತುವೆ ಮೇಲೆ  ಕಾರು ಚಾಲನೆ ಮಾಡಿಕೊಂಡು ಹೋಗುವ ಮೂಲಕ ಮೇಲ್ಸೇತುವೆಗೆ ಚಾಲನೆ ನೀಡಿದ್ದರು.
ಇದೀಗ ನಗರ ಪೊಲೀಸ್ ಆಯುಕ್ತರು ಖುದ್ದು ಬೈಕ್ ಸವಾರಿ ಮಾಡುವ ಮೂಲಕ ಈ ಮೇಲ್ಸೇತುವೆ ಮೇಲಿನ ಸವಾರಿ ಅತ್ಯಂತ ಸುಗಮವಾಗಿದೆ ಎಂದು ತಮ್ಮ ಅನಿಸಿಕೆಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.