ಸೂಪರ್ ಸ್ಟಾರ್ ರಜನಿಕಾಂತ್ ನನಗೆ ದ್ರೋಣಾಚಾರ್ಯ ಇದ್ದಂತೆ : ಉಪೇಂದ್ರ
: ,      ' 
ಬೆಂಗಳೂರು, ಆ. 25– ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜನೀಕಾಂತ್ ಅವರನ್ನು ನಾನು ಬಹಳ ವರ್ಷಗಳಿಂದಲೂ ಆರಾಧಿಸಿ ಹಿಂಬಾಲಿಸುತ್ತಾ ಬಂದಿದ್ದು, ಅವರಿಂದ ಆಧ್ಯಾತಿಕ ಹಾಗೂ ವೃತ್ತಿಪರವಾಗಿ ಅನೇಕ ವಿಷಯ ಕಲಿತಿದ್ದು ಅವರು ನನಗೆ ದ್ರೋಣಾರ್ಚಾರಿದ್ದಂತೆ ಎಂದು ಸೂಪರ್ಸ್ಟಾರ್ ಉಪೇಂದ್ರ ಅವರು ತಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಪದಭೂಷಣ ಕಮಲಹಾಸನ್, ವಿಜಯ್ಸೇತುಪತಿ ನಟಿಸಿದ್ದವಿಕ್ರಮ್' ಚಿತ್ರವನ್ನು ನಿರ್ದೇಶಿಸಿದ್ದ ಲೋಕೇಶ್ ಕನಕರಾಜ್ ಈಗ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯಕೂಲಿ’ ಚಿತ್ರಕ್ಕಾಗಿ ಆ್ಯಕ್ಷನ್ ಕಟ್ ಹೇಳಿದ್ದು, ಈ ಚಿತ್ರದಲ್ಲಿ ಸೂಪರ್ಸ್ಟಾರ್ ಉಪೇಂದ್ರ ನಟಿಸುತ್ತಿರುವ ವಿಷಯ ಕೇಳಿದ ನಂತರ ಅವರ ಅಭಿಮಾನಿಗಳು ಅವರ ಪಾತ್ರದ ಬಗ್ಗೆ ಸಾಕಷ್ಟು ಕ್ರೇಜ್ ಹೊಂದಿದ್ದರು.
ಚಿತ್ರ ತಂಡದ ಮೂಲಗಳ ಪ್ರಕಾರ ಉಪೇಂದ್ರ ಅವರು ಈ ಚಿತ್ರದಲ್ಲಿ ಖಳನಾಯಕನ ಪಾತ್ರ ನಿಭಾಯಿಸುತ್ತಿದ್ದಾರೆ ಎಂಬ ವಿಷಯ ತಿಳಿದು ಬಂದಿದ್ದು, ಈ ಕುರಿತು ಉಪೇಂದ್ರ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಬಯಸದೆ ಬಂದ ಭಾಗ್ಯ:`ಕೂಲಿ’ ಚಿತ್ರದಲ್ಲಿ ನನಗೆ ನಟಿಸುವ ಅವಕಾಶ ಸಿಕ್ಕಿರುವುದು ಬಯಸದೆ ಬಂದ ಭಾಗ್ಯವಾಗಿದೆ. ನಾನು ಕನಸು ಮನಸ್ಸಿನಲ್ಲೂ ಸೂಪರ್ ಸ್ಟಾರ್ ರಜನೀಕಾಂತ್ ಜೊತೆಗೆ ತೆರೆ ಹಂಚಿಕೊಳ್ಳುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದು ಉಪೇಂದ್ರ ಹೇಳಿದ್ದಾರೆ.
ಹೃದಯಕ್ಕೆ ತುಂಬಾ ಹತ್ತಿರವಾದ ಪಾತ್ರ:ಕೂಲಿ' ಚಿತ್ರಕ್ಕೆ ನಾನು ಆಯ್ಕೆ ಯಾಗಿದ್ದೇನೆ ಎಂಬ ವಿಷಯ ನನಗೆ ಮೊದಲೇ ತಿಳಿದಿತ್ತು. ಆದರೆ ಚಿತ್ರತಂಡದವರಿಂದಲೇ ಅಧಿಕೃತ ಮಾಹಿತಿ ಬರಲಿ ಎಂದು ಕಾದಿದ್ದೆ. ಈಗ ನಾನು ಈ ಚಿತ್ರಕ್ಕಾಗಿ ಲುಕ್ ಟೆಸ್ಟ್ ನೀಡಿ ಬಂದಿದ್ದು, ಅವರಿಗೆಲ್ಲ ತುಂಬಾ ಇಷ್ಟವಾಗಿದೆ.ಕೂಲಿ’ ಚಿತ್ರವು ನನ್ನ ಹೃದಯ ಮುಟ್ಟುವಂತಹ ಚಿತ್ರವಾಗಿದ್ದು ಇದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಉಪೇಂದ್ರ ಹೇಳಿದ್ದಾರೆ.
16 ವರ್ಷಗಳ ನಂತರ ಕಾಲಿವುಡ್ಗೆ ಎಂಟ್ರಿ:ಸೂಪರ್ ಸ್ಟಾರ್ ಉಪೇಂದ್ರ ಅವರು ನಟಿಸಿ, ನಿರ್ದೇಶಿಸಿದ್ದಎಚ್ಟುಓ' ಚಿತ್ರವನ್ನು ಏಕಕಾಲದಲ್ಲಿ ಕನ್ನಡ ಹಾಗೂ ತಮಿಳಿನಲ್ಲಿ ಚಿತ್ರೀಕರಣ ಮಾಡಿದ್ದರು. ನಂತರ ವಿಶಾಲ್ ನಟನೆಯಸತ್ಯಂ’ ಚಿತ್ರದಲ್ಲೂ ಉಪೇಂದ್ರ ಮುಖ್ಯ ಪಾತ್ರದಲ್ಲಿ ಮಿಂಚಿದ್ದರು. ಆದಾದ 16 ವರ್ಷಗಳ ನಂತರ ಉಪೇಂದ್ರ ಅವರು ಮತ್ತೆ ಕಾಲಿವುಡ್ಗೆ ಎಂಟ್ರಿ ಕೊಟ್ಟಿದ್ದು `ಕೂಲಿ’ ಚಿತ್ರದಲ್ಲಿನ ಅವರ ಪಾತ್ರವು ರಸದೌತಣ ಉಣಬಡಿಸುವುದು ಖಚಿತ.