ಗಣಪತಿ ಶೋಭಾಯಾತ್ರೆಯಲ್ಲಿ ದರ್ಶನ್-ಸುದೀಪ್ ಅಭಿಮಾನಿಗಳ ನಡುವೆ ಜಟಾಪಟಿ
    
ಚಿತ್ರದುರ್ಗ, ಸೆ. 29-ಕೋಟೆನಾಡಿನಲ್ಲಿ ಮಹಾಗಣಪತಿ ಶೋಭಾಯಾತ್ರೆಯ ವೇಳೆ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರುಗಳಾದ ಅಭಿನಯ ಚಕ್ರವರ್ತಿ, ಕಿಚ್ಚಸುದೀಪ್‌ ಹಾಗೂ ಚಾಲೆಂಜಿಂಗ್‌ ಸ್ಟಾರ್‌, ಡಿ ಬಾಸ್‌‍ ದರ್ಶನ್‌ ಅವರ ಅಭಿಮಾನಿಗಳ ನಡುವೆ ಬಾವುಟ ಹಾರಿಸುವ ವಿಚಾರದಲ್ಲಿ ತೀವ್ರ ವಾಗ್ದಾಳಿ ನಡೆದಿದೆ.
ದಶಕಕ್ಕೂ ಹೆಚ್ಚು ಕಾಲ ದಿಂದ ಕಿಚ್ಚ ಹಾಗೂ ದಚ್ಚು ಅಭಿಮಾನಿಗಳ ನಡುವೆ ಪದೇ ಪದೇ ಘರ್ಷಣೆಗಳು ನಡೆಯುತ್ತಲೇ ಇದ್ದು, ಚಿತ್ರದುರ್ಗದ ಮಹಾಗಣಪತಿ ಶೋಭಾ ಯಾತ್ರೆಯ ಘರ್ಷಣೆ ತಾಜಾ ಉದಾಹರಣೆಯಾಗಿದೆ.
ಚಿತ್ರದುರ್ಗ ನಗರ ಪೊಲೀಸ್‌‍ ಠಾಣೆ ಮುಂಭಾಗ ಮಹಾಗಣಪತಿ ಶೋಭಾಯಾತ್ರೆಯ ಅಂಗವಾಗಿ ಬಾವುಟ ಹಾರಿಸುವ ಸಲುವಾಗಿ ಇಬ್ಬರು ಸ್ಟಾರ್‌ ನಟರುಗಳ ಅಭಿಮಾನಿಗಳ ನಡುವೆ ಪರಸ್ಪರ ತಳ್ಳಾಟ, ನೂಕಾಟ ನಡೆದಿದೆ.
ಈ ಘಟನೆಯ ವೇಳೆ ಕಿಚ್ಚ ಸುದೀಪ್‌ ಅವರ ಅಭಿಮಾನಿಗಳು ಡಿ ಬಾಸ್‌‍ ದರ್ಶನ್‌ ಇದ್ದ ಬಾವುಟವನ್ನು ಹರಿದು ಹಾಕಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಚಿತ್ರದುರ್ಗ ಠಾಣೆಯ ಪೊಲೀಸರು ಮಧ್ಯಪ್ರವೇಶಿಸಿ ದರ್ಶನ್‌ ಹಾಗೂ ಸುದೀಪ್‌ ಅವರ ಭಾವಚಿತ್ರವುಳ್ಳ ಬಾವುಟಗಳನ್ನು ವಶಪಡಿಸಿ ಕೊಂಡು ಅಭಿಮಾನಿಗಳಿಗೆ ಬಿಸಿ ಮುಟ್ಟಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.