ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ : ಕೆ.ಹೆಚ್.ಮುನಿಯಪ್ಪ ಆಕ್ರೋಶ
ಬೆಂಗಳೂರು, ಮಾ.27-ಕಳೆದ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದವರನ್ನು ಕಾಂಗ್ರೆಸ್‍ಗೆ ಸೇರಿಸಿಕೊಂಡರು, ವಿಧಾನಸಭೆಯಲ್ಲಿ ಟಿಕೆಟ್ ನೀಡಿ ಗೆಲ್ಲಿಸಿಕೊಂಡರು, ಸಚಿವರನ್ನಾಗಿ ಮಾಡಿದರೂ ಆಗಲೂ ನಾನು ವಿರೋಧ ಮಾಡಲಿಲ್ಲ. ಈಗ ಉದ್ದೇಶ ಪೂರ್ವಕವಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರೇ ಆದರು ನಾವೆಲ್ಲಾ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಿ, ಗೆಲ್ಲಿಸಿಕೊಂಡು ಬರಬೇಕು ಎಂದರು.
ಕೋಲಾರದಲ್ಲಿ ನಾನು 7 ಬಾರಿಗೆದ್ದಿದ್ದೇನೆ. ಅಷ್ಟು ಬಾರಿ ಯಾರು ಗೆದ್ದಿದ್ದಾರೆ ತೋರಿಸಲಿ. ನಾನು ಒಂದು ಜಿಲ್ಲೆಗೆ ಸೀಮಿತವಾದ ನಾಯಕನಲ್ಲ. ನಾನು ರಾಜ್ಯದಾದ್ಯಂತ ನನ್ನದೇ ಆದ ಕಾರ್ಯಕರ್ತರನ್ನು ಹೊಂದಿದ್ದೇನೆ. ರಾಜ್ಯದಲ್ಲಿ ತಲಾ ಎರಡು ಕ್ಷೇತ್ರಗಳಲ್ಲಿ ಎಡಗೈ ಮತ್ತು ಬಲಗೈ ಸಮುದಾಯಕ್ಕೆ ಅವಕಾಶ ನೀಡುವುದು. ಬಾಕಿ ಉಳಿದ ಒಂದು ಕ್ಷೇತ್ರದಲ್ಲಿ ಲಂಬಾಣಿ ಅಥವಾ ಬೋವಿ ಸಮುದಾಯಕ್ಕೆ ಟಿಕೆಟ್ ನೀಡುವುದುರೂಢಿಯಲ್ಲಿದೆ.
ಈ ಬಾರಿ ಬಲಗೈ ಸಮುದಾಯಕ್ಕೆ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗಿದೆ. ಎಡಗೈ ಸಮುದಾಯಕ್ಕೆ ಒಂದು ಕ್ಷೇತ್ರದಲ್ಲಿ ಮಾತ್ರ ಟಿಕೆಟ್ ನೀಡಲಾಗಿದೆ. ನಮ್ಮದು ದೊಡ್ಡ ಸಮುದಾಯ. ಅನ್ಯಾಯವಾಗಲು ಅವಕಾಶ ನೀಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದರು.
ಕಳೆದ ಬಾರಿ ನಮ್ಮ ಪಕ್ಷದ ನಾಯಕರು ಬಿಜೆಪಿಗೆ ಬೆಂಬಲ ನೀಡಿದ್ದರಿಂದ ನಾನು ಸೋಲು ಕಂಡಿದ್ದೇನೆಯೇ ಹೊರತು, ಅದಕ್ಕೂ ಮೊದಲು ಏಳು ಬಾರಿ ಗೆದ್ದಿಲ್ಲವೇ ? ಲೋಕಸಭಾ ಕ್ಷೇತ್ರದ ಅನುಭವ ಇಲ್ಲವೇ ಎಂದು ಪ್ರಶ್ನಿಸಿದ ಮುನಿಯಪ್ಪ, ನನ್ನನ್ನು ಸೋಲಿಸಿದವರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಚುನಾವಣೆಯಲ್ಲಿ ಟಿಕೆಟ್ ನೀಡಿದರು. ಆದರೂ ನಾನು ಸುಮ್ಮನಿದ್ದೆ, ಪಕ್ಷದ ಹಿತ ಮುಖ್ಯ ಎಂಬ ಕಾರಣಕ್ಕೆ ವಿರೋಧ ಮಾಡಲಿಲ್ಲ.
ರಮೇಶ್ ಕುಮಾರ್ ಸೇರಿದಂತೆ ಅನೇಕರನ್ನು ನಾನು ಕಾಂಗ್ರೆಸ್‍ಗೆ ಕರೆ ತಂದಿದ್ದೆ. ಈಗ ಅವರೆಲ್ಲಾ ನನ್ನ ವಿರುದ್ಧವೇ ಷ್ಯಡ್ಯಂತ್ರ ನಡೆಸುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.ಸಿದ್ದರಾಮಯ್ಯಹಾಗೂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ.ಎಂಸಿ ಸುಧಾಕರ್,ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ಹಾಗೂ ಎಲ್ಲಾ ಶಾಸಕರು ನಾವು ಒಗ್ಗಟ್ಟಿ ನಿಂದ ಕೆಲಸ ಮಾಡಿ ಎರಡು ಕ್ಷೇತ್ರಗಳನ್ನು ಗೆಲ್ಲಸಿಕೊಂಡು ಬರುತ್ತೇವೆ ಎಂದು ಹೇಳಿದ್ದೇವು.
ಹೈಕಮಾಂಡ್ ಯಾವ ಅಭ್ಯರ್ಥಿಯನ್ನು ನೀಡಿದರು ನಾವುಕೆಲಸ ಮಾಡಲು ಬದ್ದರಾಗಿದ್ದೇವೆ ಎಂದರು.ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ನೀಡಿರುವ 5 ಗ್ಯಾರಂಟಿ ಯೋಜನೆಗಳ ಫಲಪ್ರದವಾಗಿ ನಮಗೆ ಜನರು ಆಶೀರ್ವಾದ ಮಾಡುತ್ತಾರೆ ಎಂದರು.