ರಾಜಕೀಯವಾಗಿ ಕುಮಾರಸ್ವಾಮಿಯವರನ್ನು ಮುಗಿಸಲು ಕಾಂಗ್ರೆಸ್‌‍ ಸಂಚು : ಶರವಣ
     
ಬೆಂಗಳೂರು, ಸೆ.30-ಕೇಂದ್ರ ಸಚಿವರಾದ ಹೆಚ್‌.ಡಿ. ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಮುಗಿಸಲು ರಾಜ್ಯದ ಕಾಂಗ್ರೆಸ್‌‍ ಸರ್ಕಾರ ಸಂಚು ರೂಪಿಸಿದೆ ಎಂದು ವಿಧಾನಪರಿಷತ್‌ ಜೆಡಿಎಸ್‌‍ ಉಪನಾಯಕ ಟಿ. ಎ.ಶರವಣ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದ ಪೊಲೀಸ್‌‍ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ಕುಮಾರಸ್ವಾಮಿ ಅವರನ್ನು ಕಾನೂನು ಬಲೆಯಲ್ಲಿ ಸಿಲುಕಿಸಲು ಕಾಂಗ್ರೆಸ್‌‍ ನಾಯಕರು ನಡೆಸಿದ್ದಾರೆ ಎಂದು ಆಪಾದಿಸಿರುವ ಅವರು, ಪಿತೂರಿಗೆ ಜೆಡಿಎಸ್‌‍ ಜಗ್ಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕುಮಾರಸ್ವಾಮಿ ಅವರನ್ನು ನಿಂದಿಸುವ ಪತ್ರ ಬರೆದಿರುವ ಲೋಕಾಯುಕ್ತ ಹಿರಿಯ ಅಧಿಕಾರಿ ಚಂದ್ರ ಶೇಖರ್‌ ಅವರನ್ನು ತಕ್ಷಣ ಅಮಾನತು ಮಾಡಲು ಕ್ರಮ ಕೈಗೊಳ್ಳಬೇಕು. ಚುನಾಯಿತ ನಾಯಕರ ವಿರುದ್ಧವೇ ಪಿತೂರಿ ನಡೆಸಿರುವ ಈ ಪೊಲೀಸ್‌‍ ಅಧಿಕಾರಿ ಮೇಲಿರುವ ಆರೋಪಗಳ ಬಗ್ಗೆ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಿಮಾಚಲ ಪ್ರದೇಶದ ಕೇಡರ್‌ ಅಧಿಕಾರಿಯಾದ ಚಂದ್ರಶೇಖರ್‌ ಅವರು, ಇಷ್ಟೊಂದು ದೀರ್ಘ ಕಾಲ ರಾಜ್ಯದಲ್ಲೇ ನೆಲೆ ಕಂಡು ಕೊಳ್ಳಲುನೆರವು ನೀಡಿದವರು ಯಾರು? ಚಂದ್ರಶೇಖರ್‌ ಅವರಿಗೂ ಈ ಪ್ರಭಾವಿ ನಾಯಕರಿಗೂ ಇರುವ ನಂಟೇನು? ಎಂಬುದು ಬಯಲಾಗಬೇಕು. ಒಬ್ಬ ಐಪಿಎಸ್‌‍ ಅಧಿಕಾರಿ ತನ್ನ ಸಹೋ ದ್ಯೋಗಿಗಳಿಗೆ ಕುಮಾರಸ್ವಾಮಿ ವಿರುದ್ಧ ಬರೆಯುವ ಪತ್ರ ಕಾಂಗ್ರೆಸ್‌‍ ಕಚೇರಿಯಿಂದ ಹೇಗೆ ಲೀಕ್‌ ಆಯಿತು? ಎಂದು ಅವರು ಪ್ರಶ್ನಿಸಿದ್ದಾರೆ.
ಚಂದ್ರಶೇಖರ್‌ ಅವರ ಆಸ್ತಿ-ಪಾಸ್ತಿ ಬಗ್ಗೆಯೂ ತನಿಖೆಯಾಗಬೇಕು. ಒಬ್ಬ ಪೋಲಿಸ್‌‍ ಅಧಿಕಾರಿಯಿಂದ 20ಕೋಟಿ ರೂಪಾಯಿ ಕೇಳಿದ್ದರೆಂಬ ಆರೋಪದ ಬಗ್ಗೆಯೂ ತನಿಖೆ ನಡೆಯಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮದ್ಯ ಪ್ರವೇಶಿಸಿ ಅಧಿಕಾರಿ ಮೇಲೆ ಕ್ರಮ ಜರುಗಿಸಲಿ ಎಂದು ಅವರು ಮನವಿ ಮಾಡಿದ್ದಾರೆ.