ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ :  ವಿಚಾರಣೆಗೆ ಬಿಭವ್‌ ಕುಮಾರ್‌ ಗೈರು
ನವದೆಹಲಿ, ಮೇ17-ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಸಹಾಯಕ ಬಿಭವ್‌ ಕುಮಾರ್‌ ಅವರು, ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ವಿಚಾರಣೆಗೆ ಇಂದು ಗೈರುಹಾಜರಾಗಿದ್ದಾರೆ.
ಎನ್‌ಸಿಡಬ್ಲ್ಯು ಕುಮಾರ್‌ಗೆ ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಎನ್‌ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಅವರು, ಆಯೋಗದ ತಂಡವು ಗುರುವಾರ ಕುಮಾರ್‌ ಅವರ ನಿವಾಸಕ್ಕೆ ನೋಟೀಸ್‌‍ ನೀಡಲು ಹೋಗಿದ್ದರು ಆದರೆ ಅವರು ಮನೆಯಲ್ಲಿ ಇರಲಿಲ್ಲ. ಕುಮಾರ್‌ ಅವರ ಪತ್ನಿ ನೋಟೀಸ್‌‍ ಸ್ವೀಕರಿಸಲು ನಿರಾಕರಿಸಿದ್ದಾರೆ. ನನ್ನ ತಂಡ ಇಂದು ಮತ್ತೆ ಪೊಲೀಸರೊಂದಿಗೆ ಅವರ ನಿವಾಸಕ್ಕೆ ತೆರಳಿದೆ ಮತ್ತು ಅವರು ನಾಳೆಯೊಳಗೆ (ಎನ್‌ಸಿಡಬ್ಲ್ಯೂ ಮುಂದೆ) ಹಾಜರಾಗದಿದ್ದರೆ, ನಾನೇ ಅವರ ನಿವಾಸಕ್ಕೆ ಹೋಗುತ್ತೇನೆ ಎಂದು ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.
ಸೋಮವಾರ ಬೆಳಗ್ಗೆ ಇಲ್ಲಿನ ಸಿವಿಲ್‌ ಲೈನ್ಸ್ ಪೊಲೀಸ್‌‍ ಠಾಣೆಗೆ ತೆರಳಿದ ಮಲಿವಾಲ್‌‍, ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಕೇಜ್ರಿವಾಲ್‌ ಅವರ ವೈಯಕ್ತಿಕ ಸಿಬ್ಬಂದಿಯೊಬ್ಬರು ತಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು ಎಂದು ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.
ಅರವಿಂದ್‌ ಕೇಜ್ರಿವಾಲ್‌ ಅವರ ಆಪ್ತ ಕಾರ್ಯದರ್ಶಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಾಜಿ ಡಿಸಿಡಬ್ಲ್ಯೂ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಆರೋಪಿಸಿದ್ದಾರೆ ಎಂಬ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಆಯೋಗ ಸ್ವಯಂಪೇರಿತ ದೂರು ದಾಖಲಿಸಿಕೊಂಡಿತ್ತು.
ಎಫ್‌ಐಆರ್‌ ದಾಖಲು:ಪ್ರಕರಣ ಸಂಬಂಧ ಸ್ವಾತಿ ಮಲಿವಾಲ್‌ ಅವರ ಹೇಳಿಕೆ ಬಳಿಕ ದೆಹಲಿ ಪೊಲೀಸರು ಐಪಿಸಿ 354, 323, 506, 509ರಡಿ ಎಫ್‌ಐಆರ್‌ ದಾಖಲಿಸಿದ್ದಾರೆ. ಪ್ರಕರಣ ಕುರಿತು ಮಾತನಾಡಿರುವ ಸಂಸದೆ, ಮಲಿವಾಲ್‌ ಮುಖ್ಯವಲ್ಲ, ದೇಶದ ಸಮಸ್ಯೆಗಳು ಮುಖ್ಯ. ಈ ಘಟನೆಯಲ್ಲಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿಯವರಿಗೆ ವಿಶೇಷ ವಿನಂತಿ ಎಂದು ಮಲಿವಾಲ್‌ ಪೋಸ್ಟ್‌ ಹಾಕಿದ್ದಾರೆ.ದೌರ್ಜನ್ಯ ನಡೆದ ಘಟನೆಯ ಕುರಿತು ಪೊಲೀಸರಿಗೆ ಹೇಳಿಕೆ ನೀಡಿದ್ದೇನೆ. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.