ಛತ್ತೀಸ್‌‍ಗಢದ ಬಿಜಾಪುರ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾದ 8 ನಕ್ಸಲರು
   8 
ರಾಯ್‌ಪುರ್‌,ಸೆ.22-ಛತ್ತೀಸ್‌‍ಗಢದ ಬಿಜಾಪುರ ಜಿಲ್ಲೆಯಲ್ಲಿ 8 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಅವರಲ್ಲಿ ಮೂವರ ತಲೆಗೆ 11 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಲಾಗಿತ್ತು ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಓರ್ವ ಮಹಿಳೆ ಸೇರಿದಂತೆ 8 ನಕ್ಸಲರು ಗಂಗಲೂರು ಮತ್ತು ಉಸೂರ್‌ ಪಮೇಡ್‌ ಪ್ರದೇಶಗಳಲ್ಲಿ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾದ (ಮಾವೋವಾದಿ) ವಿವಿಧ ವಿಭಾಗಗಳಲ್ಲಿ ಸಕ್ರಿಯರಾಗಿದ್ದರು ಎಂದು ಬಿಜಾಪುರ ಪೊಲೀಸ್‌‍ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್‌ ಯಾದವ್‌ ಹೇಳಿದ್ದಾರೆ.
ಶರಣಾದ ನಕ್ಸಲ್‌ ಚಂದರ್‌ ಕುರ್ಸಮ್‌ (38) ಕಮಾಂಡರ್‌ ಆಗಿದ್ದು, ಅವನ ತಲೆಗೆ 8 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಆತ 2003 ರಿಂದ ಕಾನೂನುಬಾಹಿರ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ.
2008 ರ ಮೋದಕ್‌ಪಾಲ್‌-ತುಂಕಿಗುಟ್ಟಾ (ಬಿಜಾಪುರ) ದಾಳಿಯಲ್ಲಿ 10 ಪೊಲೀಸ್‌‍ ಸಿಬ್ಬಂದಿ ಮತ್ತು ನೂಕನ್‌ಪಾಲ್‌-ಧಾರಾವರಂ ಹೊಂಚುದಾಳಿಯಲ್ಲಿ ಇಬ್ಬರು ಜವಾನರು ಕೊಲ್ಲಲ್ಪಟ್ಟ ಪ್ರಕರಣದಲ್ಲಿ ಭಾಗಿಯಾಗಿದ್ದ.
ಮಹಿಳಾ ಕೇಡರ್‌ ಮಾಂಗ್ಲಿ ಪೋತಮ್‌ (25), ಮತ್ತು ಆಯ್ತು ಕೊರ್ಸಾ (52) ಮಂಕೇಲಿ ಱಜನ್ತಾನ ಸರ್ಕಾರ್‌ೞ ತಂಡದ ಮುಖ್ಯಸ್ಥರಾಗಿದ್ದರು. ಪೋತಮ್‌ ಮತ್ತು ಕೊರ್ಸಾ ತಲೆಗೆ ಕ್ರಮವಾಗಿ 2 ಲಕ್ಷ ರೂ. ಮತ್ತು 1 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶರಣಾದ ನಕ್ಸಲೀಯರಿಗೆ ತಲಾ 25,000 ರೂ. ನೆರವು ನೀಡಲಾಗಿದ್ದು, ರಾಜ್ಯ ಸರ್ಕಾರದ ನೀತಿಯಂತೆ ಮತ್ತಷ್ಟು ಪುನರ್ವಸತಿ ಕಲ್ಪಿಸಲಾಗುತ್ತದೆ. ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ 178 ನಕ್ಸಲೀಯರು ಶರಣಾಗಿದ್ದು, 378 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.