ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಂಧನ ಕುರಿತು ಗೃಹಸಚಿವ ಪರಮೇಶ್ವರ್‌ ಪ್ರತಿಕ್ರಿಯೆ
ಬೆಂಗಳೂರು,ಜೂ.11– ಚಿತ್ರದುರ್ಗದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ವೇಳೆ ದರ್ಶನ್‌ ಅವರ ಹೆಸರು ಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ದರ್ಶನ್‌ರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.
ದರ್ಶನ್‌ ಅವರ ಹೆಸರು ಯಾವ ಕಾರಣಕ್ಕೆ ಈ ಪ್ರಕರಣದಲ್ಲಿ ಬಂದಿದೆ ಗೊತ್ತಿಲ್ಲ. ಮೃತಪಟ್ಟ ರೇಣುಕಾಸ್ವಾಮಿ ಪವಿತ್ರಾಗೌಡರ ಮೊದಲ ಪತಿ ಎಂಬ ಮಾಹಿತಿ ಕೂಡ ಅಸ್ಪಷ್ಟವಾಗಿದೆ. ವಿಚಾರಣೆ ಹಂತದಲ್ಲಿರುವುದರಿಂದ ಸದ್ಯಕ್ಕೆ ಯಾವುದನ್ನೂ ಹೇಳಲಾಗುವುದಿಲ್ಲ ಎಂದರು.
ಈ ಮೊದಲು ಬಂಧಿತರಾದ ವ್ಯಕ್ತಿಗಳು ದರ್ಶನ್‌ರ ಹೆಸರು ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಪ್ರಕರಣ ಆಗಿರುವುದರಿಂದ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ತನಿಖೆಯ ಬಳಿಕವಷ್ಟೇ ಉಳಿದ ವಿಚಾರಗಳು ಗೊತ್ತಾಗಲಿವೆ. ಈ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ ಎಂದು ಹೇಳಿದರು.