 : ಗ್ಯಾರಂಟಿ ಸರ್ಕಾರದಿಂದ ಜನರ ಜೇಬಿಗೆ ಕತ್ತರಿ, ಪೆಟ್ರೋಲ್‌-ಡೀಸೆಲ್‌ ತೆರಿಗೆ ಹೆಚ್ಚಿಸಿ ಆದೇಶ
ಬೆಂಗಳೂರು,ಜೂ.15-ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಸರ್ಕಾರ ವಾಹನ ಸವಾರರ ಜೇಬಿಗೆ ಕತ್ತರಿ ಪ್ರಯೋಗ ಮಾಡಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟದ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದೆ. ಶನಿವಾರದಿಂದಲೇ ಅನ್ವಯವಾಗುವಂತೆ ರಾಜ್ಯಾಧ್ಯಂತ ಪ್ರತಿ ಲೀಟರ್‌ ಪ್ರೆಟೋಲ್‌ ದರವನ್ನು 3 ರೂ. ಹಾಗೂ ಡೀಸೆಲ್‌ ದರನ್ನು 3 ರೂ. 50 ಪೈಸೆಗೆ ಹೆಚ್ಚಿಸಿ ಆದೇಶ ಹೊರಡಿಸಿದೆ.
ಇದರಿಂದ ಇನ್ನು ಮುಂದೆ ಪೆಟ್ರೋಲ್‌ ದರ ಲೀಟರ್‌ಗೆ 103 ರೂ.ಗೆ ಹಾಗೂ ಡೀಸೆಲ್‌ 91 ರೂ. 50 ಪೈಸೆ ಏರಿಕೆಯಾಗಿದೆ. ಈ ಹಿಂದೆಯೇ ಡೀಸೆಲ್‌ ಮತ್ತು ಪೆಟ್ರೋಲ್‌ ಮಾರಾಟ ತೆರಿಗೆ ದರವನ್ನು ಏರಿಸಬೇಕೆಂಬ ಪ್ರಸ್ತಾವನೆ ಸರ್ಕಾರದ ಮುಂದಿತ್ತಾದರೂ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ತಡೆಹಿಡಿಯಲಾಗಿತ್ತು.
ವಿರೋಧ ಪಕ್ಷಗಳು ಇದನ್ನೇ ಅಸ್ತ್ರ ಮಾಡಿಕೊಂಡರೆ ಫಲಿತಾಂಶದಲ್ಲಿ ಹಿನ್ನಡೆಯಾಗಬಹುದೆಂಬ ಕಾರಣಕ್ಕೆ ಸರ್ಕಾರ ದರ ಹೆಚ್ಚಿಸುವ ದುಸ್ಸಾಹಸಕ್ಕೆ ಮುಂದಾಗಿರಲಿಲ್ಲ.
ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ದರ ಹೆಚ್ಚಿಸುವ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಬೇಕಾದ ಅಗತ್ಯ ಇರುವ ಕಾರಣ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಂದಿದೆ.