ಜಾಮೀನು ಸಿಕ್ಕರೂ ​ಕೇಜ್ರಿವಾಲ್‌ಗಿಲ್ಲ ಬಿಡುಗಡೆ ಭಾಗ್ಯ
ನವದೆಹಲಿ,ಜು.12-ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆದರೆ, ಅಬಕಾರಿ ನೀತಿ ಪ್ರಕರಣವನ್ನು ಸಿಬಿಐ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿರುವುದರಿಂದ ಜಾಮೀನು ದೊರೆತರೂ ಕೇಜ್ರಿವಾಲ್‌ ಅವರು ಜೈಲಿನಲ್ಲೇ ಇರುವಂತಾಗಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ವಿಸ್ತ್ರತ ಪೀಠಕ್ಕೆ ವರ್ಗಾಯಿಸುವಂತೆಯೂ ನ್ಯಾಯಾಲಯ ಸೂಚನೆ ನೀಡಿದೆ.
ಬಂಧನದ ಕಾರಣ ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಕೇಜ್ರಿವಾಲ್‌ಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದ್ದು, ಆ ಕುರಿತು ಅರವಿಂದ್‌ ಕೇಜ್ರಿವಾಲ್‌ ಅವರೇ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಲಯ ಹೇಳಿದೆ.
ಈಗ ರದ್ದಾದ ಮದ್ಯ ಮಾರಾಟ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕೇಜ್ರಿವಾಲ್‌ ಅವರನ್ನು ಹಣಕಾಸು ಅಪರಾಧ ನಿಗ್ರಹ ಸಂಸ್ಥೆ ಮಾರ್ಚ್‌ನಲ್ಲಿ ಬಂಧಿಸಿತ್ತು. ವಿಚಾರಣಾ ನ್ಯಾಯಾಲಯವು ಜೂನ್‌ 20 ರಂದು ಆಮ್‌ ಆದಿ ಪಕ್ಷದ (ಎಎಪಿ) ಮುಖ್ಯಸ್ಥರಿಗೆ ಜಾಮೀನು ನೀಡಿತು ಆದರೆ ದೆಹಲಿ ಹೈಕೋರ್ಟ್‌ ನಂತರ ಆ ಆದೇಶವನ್ನು ತಡೆಹಿಡಿದಿತ್ತು. ದೆಹಲಿ ಹೈಕೋರ್ಟ್‌ ನಿರ್ಧಾರ ಪ್ರಶ್ನಿಸಿ ಅರವಿಂದ್‌ ಕೇಜ್ರಿವಾಲ್‌ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.