ದೆಹಲಿ : ಚಿಕಿತ್ಸೆ ಪಡೆಯುವ ನೆಪದಲ್ಲಿ ಬಂದು ಗುಂಡಿಟ್ಟು ವೈದ್ಯನ ಹತ್ಯೆ
     2       
ನವದೆಹಲಿ, ಅ. 3 (ಪಿಟಿಐ)– ಆಗ್ನೇಯ ದೆಹಲಿಯ ಕಾಳಿಂದಿ ಕುಂಜ್‌ ಪ್ರದೇಶದಲ್ಲಿ ಇಂದು ಮುಂಜಾನೆ ನರ್ಸಿಂಗ್‌ ಹೋಮ್‌ ಒಂದರಲ್ಲಿ ವೈದ್ಯರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಬಾಲಾಪರಾಧಿಗಳಂತೆ ಕಂಡುಬಂದ ಆರೋಪಿಗಳು ಚಿಕಿತ್ಸೆಗಾಗಿ ಬಂದು ಯುನಾನಿ ವೈದ್ಯ (ಬಿಯುಎಂಎಸ್‌‍) ಜಾವೇದ್‌ ಅಖ್ತರ್‌ ಮೇಲೆ 1.45 ರ ಸುಮಾರಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಖ್ತರ್‌ ಕುರ್ಚಿಯಲ್ಲಿ ತಲೆಯಿಂದ ರಕ್ತ ಸೋರುತ್ತಿರುವುದು ಕಂಡುಬಂದಿದೆ. ಸುಮಾರು 16 ವರ್ಷ ವಯಸ್ಸಿನ ಇಬ್ಬರು ಹುಡುಗರು ಮೂರು ಹಾಸಿಗೆಗಳ ನಿಮಾ ಆಸ್ಪತ್ರೆಗೆ ಡ್ರೆಸ್ಸಿಂಗ್‌ ಮಾಡಲು 1 ಗಂಟೆ ಸುಮಾರಿಗೆ ಬಂದಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದರು.
ಅವರಲ್ಲಿ ಒಬ್ಬರು ಕಾಲ್ಬೆರಳಿಗೆ ಬ್ಯಾಂಡೇಜ್‌ ಹಾಕಿದ್ದರು ಮತ್ತು ಹಿಂದಿನ ದಿನವೂ ಆಸ್ಪತ್ರೆಗೆ ಹೋಗಿದ್ದರು ಎಂದು ಅಧಿಕಾರಿ ಹೇಳಿದರು. ಡ್ರೆಸ್ಸಿಂಗ್‌ ನಂತರ ಇಬ್ಬರು ಹುಡುಗರು ಅಖ್ತರ್‌ ಕ್ಯಾಬಿನ್‌ ಒಳಗೆ ಹೋದರು.
ಸ್ವಲ್ಪ ಸಮಯದ ನಂತರ ರಾತ್ರಿ ನರ್ಸಿಂಗ್‌ ಸಿಬ್ಬಂದಿ ಗಜಲಾ ಪರ್ವೀನ್‌ ಮತ್ತು ಮೊಹಮದ್‌ ಕಾಮಿಲ್‌ ಗುಂಡೇಟಿನ ಶಬ್ದ ಕೇಳಿದರು. ಪರ್ವೀನ್‌ ಕ್ಯಾಬಿನ್‌ ಕಡೆಗೆ ಧಾವಿಸಿದಾಗ ಅಖ್ತರ್‌ ರಕ್ತದ ಮಡುವಿನಲ್ಲಿ ಇನ್ನೂ ಕುಳಿತಿರುವುದನ್ನು ಕಂಡರು.
ಮೇಲ್ನೋಟಕ್ಕೆ, ಇದು ಉದ್ದೇಶಪೂರ್ವಕ ಹತ್ಯೆಯ ನಿದರ್ಶನವಾಗಿದೆ ಎಂದು ತೋರುತ್ತದೆ, ರಿಸೆಪ್ಷನ್‌, ಡ್ರೆಸ್ಸಿಂಗ್‌ ಕೊಠಡಿ ಮತ್ತು ಗ್ಯಾಲರಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದಶ್ಯಾವಳಿಗಳನ್ನು ಪೊಲೀಸರು ವಿಶ್ಲೇಷಿಸುತ್ತಿದ್ದಾರೆ.