ಕ್ಷಿಪಣಿ ವಿಜ್ಞಾನಿ, ಪದ್ಮಭೂಷಣ ರಾಮ್ ನಾರಾಯಣ್ ಅಗರ್ವಾಲ್ ವಿಧಿವಶ
ನವದೆಹಲಿ,ಆ.16– ಜಗತ್ತಿನ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಒಂದಾದ ಭಾರತದ ಅಗ್ನಿ ಕ್ಷಿಪಣಿಯ ಪಿತಾಮಹ ಖ್ಯಾತ ಡಿಆರ್ಡಿಒ ಕ್ಷಿಪಣಿ ವಿಜ್ಞಾನಿ ಪದ್ಮಭೂಷಣ ಪುರಸ್ಕೃತ ರಾಮ್ ನಾರಾಯಣ್ ಅಗರ್ವಾಲ್ (84) ನಿಧನರಾಗಿದ್ದಾರೆ.
ಅಗರ್ವಾಲ್ ದೇಶವನ್ನು ಪ್ರಮುಖ ಕ್ಷಿಪಣಿ ಶಕ್ತಿಯನ್ನಾಗಿ ಮಾಡುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಭಾರತದ ದೀರ್ಘ-ಶ್ರೀಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಯಲ್ಲಿ ಅಗರ್ವಾಲ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ಅಗ್ನಿ ಕ್ಷಿಪಣಿಗಳ ಮೊದಲ ಕಾರ್ಯಕ್ರಮದ ನಿರ್ದೇಶಕರಾಗಿದ್ದರು.
ಡಿಆರ್ಡಿಒ ತಯಾರಿಸಿದ ಅಗ್ನಿ ಕ್ಷಿಪಣಿಯನ್ನು ಭಾರತದ ಪರಮಾಣು ಸಾಮರ್ಥ್ಯದ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ. ಇಲ್ಲಿಯವರೆಗೆ, ಅಗ್ನಿ ಕ್ಷಿಪಣಿಯ ಐದು ರೂಪಾಂತರಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವಂತೆ ಮಾಡುವುದು ಇದರ ಉದ್ದೇಶವಾಗಿತ್ತು.
ಅಗ್ನಿ 1- 700-800 ಕಿ.ಮೀ, ಅಗ್ನಿ 2 – 2000 ಕಿ.ಮೀಗಿಂತ ಹೆಚ್ಚು, ಅಗ್ನಿ 3 – 2500 ಕಿ.ಮೀಗಿಂತ ಹೆಚ್ಚು, ಅಗ್ನಿ 4 – 3500 ಕಿ.ಮೀಗಿಂತ ಹೆಚ್ಚು ಮತ್ತು ಅಗ್ನಿ 5- 5000 ಕಿ.ಮೀ ಗಿಂತ ಹೆಚ್ಚು ಕ್ರಮಿಸುವ ಸಾಮರ್ಥ್ಯ ಹೊಂದಿದೆ