ಕೋಲ್ಕತ್ತಾ ವೈದ್ಯೆ ಪ್ರಕರಣ : ಸುಪ್ರೀಂಗೆ ವರದಿ ಸಲ್ಲಿಸಿದ ಸಿಬಿಐ
  - :       
ನವದೆಹಲಿ,ಆ.22-ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ತರಬೇತಿ ನಿರತ ವೈದ್ಯೆಯ ಮೇಲೆ ನಡೆದ ಅಮಾನುಷ ಘಟನೆಯನ್ನು ತಿರುಚಲಾಗಿದೆ ಎಂದು ಸುಪ್ರೆಂ ಕೋರ್ಟ್‌ಗೆ ಸಲ್ಲಿಸಿರುವ ಸ್ಥಿತಿಗತಿ ವರದಿಯಲ್ಲಿ ಸಿಬಿಐ ಉಲ್ಲೇಖಿಸಿದೆ.
ಈ ಅಮಾನುಷ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆದಿದೆ. ಅಂತಿಮ ಸಂಸ್ಕಾರದ ನಂತರ ಎಫ್‌ಐಆರ್‌ ದಾಖಲಿಸಲಾಗಿದೆ. ಅಲ್ಲದೇ, ಈ ಸಂಪೂರ್ಣ ವಿಚಾರದಲ್ಲಿ ಆಸ್ಪತ್ರೆ ಆಡಳಿತದ ಧೋರಣೆ ಉದಾಸೀನವಾಗಿದೆ ಎಂದು ಸುಪ್ರೆಂ ಕೋರ್ಟ್‌ಗೆ ಸಲ್ಲಿಸಿರುವ ಸ್ಥಿತಿ ವರದಿಯಲ್ಲಿ ಸಿಬಿಐ ಹೇಳಿದೆ.
ಘಟನೆಯ ಬಗ್ಗೆ ಸಂತ್ರಸ್ತೆಯ ಕುಟುಂಬಕ್ಕೆ ತಡವಾಗಿ ಮಾಹಿತಿ ನೀಡಲಾಗಿದೆ. ಆತಹತ್ಯೆಯ ಬಗ್ಗೆ ಕುಟುಂಬಕ್ಕೆ ಮೊದಲು ಮಾಹಿತಿ ನೀಡಲಾಗಿತ್ತು. ಕೊಲೆಯನ್ನು ಆತಹತ್ಯೆ ಎಂದು ಕರೆಯಲು ಯತ್ನಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಪೊಲೀಸ್‌‍ ಡೈರಿ ಮತ್ತು ಮರಣೋತ್ತರ ಪರೀಕ್ಷೆಯ ಸಮಯಕ್ಕೂ ವ್ಯತ್ಯಾಸವಿದೆ. ಆರೋಪಿಗಳ ವೈದ್ಯಕೀಯ ಪರೀಕ್ಷೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದೆ.
ಕೋಲ್ಕತ್ತಾದ ಆರ್ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಽಸಿದಂತೆ ಅರ್ಜಿಗಳ ವಿಚಾರಣೆಯನ್ನು ಸುಪ್ರೆಂಕೋರ್ಟ್ ನಡೆಸುತ್ತಿದೆ. ಪ್ರಕರಣವನ್ನು ಸ್ವಯಂ ಪ್ರೀರಿತವಾಗಿ ಸ್ವೀಕರಿಸಿದ ಸುಪ್ರೆಂಕೋರ್ಟ್‌, ಆಗಸ್ಟ್‌ 22 ರಂದು ತನ್ನ ತನಿಖೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸಲು ಸಿಬಿಐಗೆ ಹೇಳಿತ್ತು.
ಸಿಬಿಐ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುರ್ಷಾ ಮೆಹ್ತಾ ಅವರ, ಐದನೇ ದಿನದಲ್ಲಿ ಏಜೆನ್ಸಿ ತನಿಖೆಯನ್ನು ಕೈಗೆತ್ತಿಕೊಂಡಿದೆ. ಅಷ್ಟರಲ್ಲಿ ಅಪರಾಧ ನಡೆದ ಸ್ಥಳದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಎಲ್ಲವನ್ನೂ ವಿಡಿಯೊ ರೆಕಾರ್ಡಿಂಗ್‌ ಮಾಡಲಾಗಿದೆ ಎಂಬುದನ್ನು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿದ್ದು ಪ್ರತಿ ಘಟನೆಯ ಟೈಮ್‌ಲೈನ್‌ ಹೊಂದಿದೆ ಎಂದಿದೆ.
ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅತಿಯಾದ ಕೆಲಸ ಮಾಡುವ ವೈದ್ಯರನ್ನು ಯಾರಾದರೂ ಚುಡಾಯಿಸಿದಾಗಲೂ ವಿರೋಧಿಸುವ ದೈಹಿಕ ಶಕ್ತಿ ಇರುವುದಿಲ್ಲ ಎಂದು ಪ್ರತಿಭಟನಾನಿರತ ವೈದ್ಯರ ಪರ ವಾದಿಸಿದ ವಕೀಲರು ಹೇಳಿದ್ದಾರೆ.
ನಾವು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿದ್ದೇವೆ, ಯಾರಾದರೂ ಇಲ್ಲದಿದ್ದಾಗ ನಾನು ಆಸ್ಪತ್ರೆಯ ನೆಲದ ಮೇಲೆ ಮಲಗಿದ್ದೇನೆ, ವೈದ್ಯರು 36 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ನಮಗೆ ತಿಳಿದಿದೆ ಎಂದು ಸಿಜೆಐ ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ.ಇದಕ್ಕೂ ಮುನ್ನ ಆಗಸ್ಟ್‌ 20 ರಂದು ಸುಪ್ರೆಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ನೇತೃತ್ವದಲ್ಲಿ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್‌ ಮಿಶ್ರಾ ಅವರು ಈ ಪ್ರಕರಣದ ವಿಚಾರಣೆ ನಡೆಸಿದ್ದರು.
ಕೋಲ್ಕತ್ತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸಲು 21 ವಕೀಲರ ತಂಡವನ್ನು ನೇಮಿಸಲಾಗಿದೆ. ಈ ತಂಡದಲ್ಲಿ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌‍, ಮೇನಕಾ ಗುರುಸ್ವಾಮಿ, ಸಂಜಯ್‌ ಬಸು, ಆಸ್ತಾ ಶರ್ಮಾ, ಶ್ರೀಸತ್ಯ ಮೊಹಾಂತಿ, ನಿಪುನ್‌ ಸಕ್ಸೇನಾ, ಅಂಜು ಥಾಮಸ್‌‍, ಅಪ್ರಜಿತಾ ಜಮ್ವಾಲ್‌‍, ಸಂಜೀವ್‌ ಕೌಶಿಕ್‌, ಮಾಂತಿಕಾ ಹರ್ಯಾಣಿ, ಶ್ರೇಯಸ್‌‍ ಅವಸ್ತಿ, ಉತ್ಕರ್ಷ್‌ ಪ್ರತಾಪ್‌, ಪ್ರತಿಭಾ ಯಾದ, ಲಿಹ್ಜು ದಿ ಶಿಂಯ್‌ ಕಾಸ್ಟ್‌ ಇದ್ದಾರೆ. ರಿಪುಲ್‌ ಸ್ವಾತಿ ಕುಮಾರಿ, ಲವಕೇಶ್‌ ಭಂಭಾನಿ, ಅರುಣಿಸಾ ದಾಸ್‌‍, ದೇವದೀಪ್ತ ದಾಸ್‌‍, ಅರ್ಚಿತ್‌ ಅದ್ಲಾಖಾ, ಆದಿತ್ಯ ರಾಜ್‌ ಪಾಂಡೆ ಮತ್ತು ಮೆಹ್ರೀನ್‌ ಗರ್ಗ್‌ ಸೇರಿದ್ದಾರೆ.
ಕೇಂದ್ರ ಸರ್ಕಾರದ ಪರವಾಗಿ ಐವರು ವಕೀಲರು ನ್ಯಾಯಾಲಯದಲ್ಲಿದ್ದಾರೆ. ಇವರಲ್ಲಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಅಡ್ವೊಕೇಟ್‌ ಮಾಧವ್‌ ಸಿಂಘಾಲ್‌‍, ಅಡ್ವೊಕೇಟ್‌ ಅರ್ಕಜ್‌ ಕುಮಾರ್‌, ಅಡ್ವೊಕೇಟ್‌ ಸ್ವಾತಿ ಲ್ಡಿಯಾಲ್‌ ಮತ್ತು ಎಂಕೆ ಮರೋರಿಯಾ ಸೇರಿದ್ದಾರೆ.