ರಾಮೇಶ್ವರ ಕೆಫೆ ಸ್ಪೋಟ ಪ್ರಕರಣ : ಐವರು ಶಂಕಿತರು ಎನ್‍ಐಎ ವಶಕ್ಕೆ
ನವದೆಹಲಿ,ಮಾ.5- ಕರ್ನಾಟಕದ ರಾಜಧಾನಿ ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ತಮಿಳುನಾಡಿನಲ್ಲಿ ಐವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ. ಕಳೆದ ರಾತ್ರಿ ಚೆನ್ನೈನ ಸಾಯಿದಾಪೇಟೆಯಲ್ಲಿ ದಿಢೀರ್ ದಾಳಿ ನಡೆಸಿದ ಎನ್‍ಐಎ ಅಧಿಕಾರಿಗಳ ತಂಡ, ಐವರು ಶಂಕಿತರನ್ನು ವಶಕ್ಕೆ ಪಡೆದು ರಹಸ್ಯ ಸ್ಥಳವೊಂದರಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಚೆನ್ನೈನ ಮನ್ನಾಡಿ, ಮುಥಿಯಾಲ್ ಪೇಟ್ಟೈನಲ್ಲಿ ಇಂದು ಬೆಳಗ್ಗೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿತ್ತು. ಆರಂಭದಲ್ಲಿ ಮೂವರು, ನಂತರ ಐವರನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆಯ ಬಳಿಕ ಐವರನ್ನು ಬಂಧಿಸಲಾಗಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಕಳೆದ ಮಾ.1ರಲ್ಲೂ ಬೆಂಗಳೂರಿನ ಎಚ್‍ಎಎಲ್‍ನ ಕುಂದಲಹಳ್ಳಿಯ ರಾಮೇಶ್ವರ ಕೆಫೆಯಲ್ಲಿ ಸುಧಾರಿತ ಬಾಂಬ್ ಸ್ಪೋಟಗೊಂಡು ಹತ್ತು ಮಂದಿ ಗಾಯಗೊಂಡಿದ್ದರು. ಸ್ಪೋಟಗೊಂಡ ನಂತರ ಶಂಕಿತ ವ್ಯಕ್ತಿಯು ಮುಖಕ್ಕೆ ಮಾಸ್ಕ್ ಧರಿಸಿ ಬ್ಯಾಗ್ ಹಾಕಿಕೊಂಡು ಹೊಸೂರು ಮೂಲಕ ತಮಿಳುನಾಡು ಪ್ರವೇಶಿಸಿ ಚೆನ್ನೈಗೆ ತೆರಳಿದ್ದಾನೆ ಎಂಬ ಮಾಹಿತಿಯನ್ನು ಎನ್‍ಐಎ ಕಲೆಹಾಕಿದೆ.
ಇದೀಗ ಎನ್‍ಐಎ ವಶದಲ್ಲಿರುವ ಐವರು ಶಂಕಿತರಿಗೂ ಮತ್ತು ಬೆಂಗಳೂರಿನಲ್ಲಿ ಸಂಭವಿಸಿದ ಬಾಂಬ್ ಸ್ಪೋಟಕ್ಕೂ ಒಂದೊಂದಕ್ಕು ಸಾಮ್ಯತೆ ಇದೆ ಎಂದು ಎಲ್ಲಾ ಆಯಾಮಗಳಲ್ಲೂ ತನಿಖೆಗೆ ಗುರಿಪಡಿಸಿದ್ದಾರೆ.ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಿಕೊಂಡಿರುವ ಎನ್‍ಐಎ ತಂಡ ಐಸಿಸ್ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದಾರಾ ಎಂಬುದರ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಗೃಹ ಇಲಾಖೆ ಎನ್‍ಐಎಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನಲೆಯಲ್ಲಿ ತನಿಖೆಯನ್ನು ಎಲ್ಲಾ ಆಯಾಮಗಳಲ್ಲೂ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ತನಿಖೆ ಚುರುಕು:ಇನ್ನು ಪ್ರಕರಣವನ್ನು ಕೈಗೆತ್ತಿಕೊಂಡಿರುವ ಎನ್‍ಐಎ ಬಾಂಬ್ ಸ್ಪೋಟಗೊಂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕಿದೆ. ಎನ್‍ಐಎ ಎಫ್‍ಐಆರ್ ದಾಖಲಿಸಿಕೊಂಡ ಬೆನ್ನಲ್ಲೆ ಐಜಿಪಿ ಸಂತೋಷ್ ರೆಸ್ತೊಗಿ ಅವರ ನೇತೃತ್ವದ ತಂಡ ತನಿಖೆಯನ್ನು ಚುರುಕುಗೊಳಿಸಿದೆ ಎಂದು ತಿಳಿದುಬಂದಿದೆ. ಮಾರ್ಚ್ 1 ಶುಕ್ರವಾರದಂದು ವೈಟ್‍ಫೀಲ್ಡ್ ಬಳಿ ಇರುವ ದಿ ರಾಮೇಶ್ವರಂ ಕೆಫೆಯಲ್ಲಿ ಎರಡು ಬಾಂಬ್ ಸ್ಪೋಟಗೊಂಡಿತ್ತು. ಈ ಬಾಂಬ್ ದಾಳಿಯಿಂದ 10 ಮಂದಿ ಗಾಯಗೊಂಡಿದ್ದರು.