ನೀವು ಹೇಳಿದ ತಕ್ಷಣ ಚುನಾವಣೆ ನಡೆಸೋಕಾಗಲ್ಲ : ಚುನಾವಣಾ ಆಯೋಗ
 
ನವದೆಹಲಿ,ಸೆ.16– ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಹೇಳಿದ ತಕ್ಷಣವೇ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.ಈ ಮೂಲಕ ದೆಹಲಿ ವಿಧಾನಸಭೆ ಚುನಾವಣೆಯನ್ನು ನವೆಂಬರ್ ತಿಂಗಳಿನಲ್ಲಿ ಮಹಾ ರಾಷ್ಟ್ರ ವಿಧಾನಸಭೆ ಚುನಾವಣೆಯ ಜೊತೆಯೇ ನಡೆಸಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಮಾಡಿಕೊಂಡಿದ್ದ ಮನವಿಯನ್ನು ಪರೋಕ್ಷವಾಗಿ ತಿರಸ್ಕರಿಸಿದೆ.
ಚುನಾವಣೆ ನಡೆಸುವುದು ಆಯೋಗದ ಮೂಲಭೂತ ಕರ್ತವ್ಯ. ಆದರೆ ರಾಜಕೀಯ ಪಕ್ಷಗಳು ಇಲ್ಲವೇ ಸರ್ಕಾರ ಹೇಳಿದ ತಕ್ಷಣ ಚುನಾವಣೆ ನಡೆಸಲು ಸಾಧ್ಯವಿಲ್ಲ. ಅದಕ್ಕೆ ಅದರದೇ ಆದ ರೀತಿನೀತಿಗಳು, ಕಾನೂನು ಪ್ರಕ್ರಿಯೆಗಳಿರುತ್ತವೆ ಎಂದು ಹೇಳಿದೆ.ಬರುವ ನವೆಂಬರ್ ತಿಂಗಳಿನಲ್ಲಿ ಮಹಾರಾಷ್ಟ್ರ ಮತ್ತು ಜಾರ್ಖಂಡ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಎರಡೂ ರಾಜ್ಯಗಳಿಗೆ ಹೆಚ್ಚಿನ ಭದ್ರತೆ ಪಡೆ ಬೇಕಾಗಿರುವುದರಿಂದ ಆಯೋಗ ದೆಹಲಿಗೂ ಚುನಾವಣೆ ಘೋಷಣೆ ಮಾಡುವ ಸಾಧ್ಯತೆಗಳು ಕ್ಷೀಣಿಸಿವೆ.
ದೆಹಲಿ ವಿಧಾನಸಭೆ ಅವಧಿಯು 2025 ಫೆಬ್ರವರಿ ತಿಂಗಳ ಅಂತ್ಯದವರೆಗೂ ಇರಲಿದೆ. ಒಂದು ವೇಳೆ ಅವಧಿಗೂ ಮುನ್ನವೇ ವಿಧಾನಸಭೆಯನ್ನು ವಿಸರ್ಜಿಸಿದರೆ ರಾಷ್ಟ್ರಪತಿ ಆಡಳಿತ ಜಾರಿಯಾಗಿ ನಂತರ ಸೂಕ್ತ ಸಮಯದಲ್ಲಿ ಚುನಾವಣೆ ವೇಳಾಪಟ್ಟಿಯನ್ನು ಆಯೋಗ ಪ್ರಕಟಿಸಲಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಕೇಜ್ರಿವಾಲ್ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಆದರೆ ವಿಧಾನಸಭೆಯನ್ನು ಅವರು ವಿಸರ್ಜನೆ ಮಾಡುವುದಾಗಿ ಘೋಷಣೆ ಮಾಡಿಲ್ಲ. ಸರ್ಕಾರದ ಅವಧಿ ಇರುವಾಗಲೇ ಆಯೋಗ ಯಾವ ಆಧಾರದ ಮೇಲೆ ದಿನಾಂಕ ಘೋಷಣೆ ಮಾಡುತ್ತದೆ ಎಂದು ಸಂವಿಧಾನ ತಜ್ಞರು ಪ್ರಶ್ನೆ ಮಾಡಿದ್ದಾರೆ.
ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರ್ಯ ಅವರು ಒಂದು ವಿಧಾನಸಭೆ ಚುನಾವಣೆಯನ್ನು ಅವಧಿಗೂ ಮುನ್ನ ವಿಸರ್ಜನೆ ಮಾಡಬೇಕೆಂದರೆ ಅದು ವಿಸರ್ಜನೆಯಾಗಿರಬೇಕು. ಸರ್ಕಾರ ಪೂರ್ಣಾವಧಿವರೆಗೂ ಇದ್ದರೆ ಆಯೋಗ ಏಕಾಏಕಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕ್ರೇಜಿವಾಲ್ ನಾನು ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ ಎಂದು ಹೇಳಿದ್ದಾರೆ ಹೊರತು ವಿಧಾನಸಭೆ ವಿಸರ್ಜನೆ ಮಾಡುವುದಾಗಿ ಎಲ್ಲಿಯೂ ಹೇಳಿಲ್ಲ. ಹಾಗಿರುವಾಗ ಅವಧಿಗೂ ಮುನ್ನ ಚುನಾವಣೆ ನಡೆಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.