ಪತ್ನಿ ರುಂಡ ಕಡಿದು ಕೈಯಲ್ಲಿ ಹಿಡಿದು ಓಡಾಡಿದ್ದ ಪತಿಯ ಬಂಧನ
       ' 
ಪಾಟ್ನಾ,ಸೆ.17-ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಲೆ ಮಾಡಿ, ಆಕೆಯ ತಲೆಯನ್ನು ಕೈಯಲ್ಲಿ ಹಿಡಿದು ಊರೂರು ಸುತ್ತುತ್ತಿದ್ದ ವ್ಯಕ್ತಿಯನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.
ಮಾಧೇಪುರದ ಶ್ರೀನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಪೊಖಾರಿಯಾದಲ್ಲಿ ಘಟನೆ ನಡೆದಿದ್ದು, ಅರ್ಜುನ್‌ ಶರ್ಮಾ ಎಂಬಾತ ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಆತ ತನ್ನ ಪತ್ನಿ ಪೂಜಾದೇವಿಯನ್ನು ಹರಿತವಾದ ಚಾಕುವಿನಿಂದ ಕತ್ತು ಸೀಳಿ ಕೊಲೆಗೈದಿದ್ದಾನೆ ಎನ್ನುವ ಮಾಹಿತಿ ನಮಗೆ ಸಿಕ್ಕಿತ್ತು ತಕ್ಷಣ ಕಾರ್ಯಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ ಎಂದು ಡಿಎಸ್‌‍ಪಿ ಮನೋಜ್‌ ಮೋಹನ್‌ ತಿಳಿಸಿದ್ದಾರೆ.  ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್‌ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಘಟನೆಗೆ ಬಳಸಿದ್ದ ಆಯುಧ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಅರ್ಜುನ್‌ ಕೈಯಲ್ಲಿ ಬ್ಯಾಗ್‌ ಹಿಡಿದು ಪೊಲೀಸ್‌‍ ಠಾಣೆಗೆ ಬರುತ್ತಿದ್ದ ಎಂದು ನಜೀರ್‌ ತಿಳಿಸಿದ್ದಾನೆ. ಚೀಲದಿಂದ ರಕ್ತ ಸೋರುತ್ತಿತ್ತು. ಅಷ್ಟರಲ್ಲಿ ಒಬ್ಬ ಪೋಲೀಸ್‌‍ ಅವನನ್ನು ತಡೆದಿದ್ದರು, ಆಗ ಬ್ಯಾಗ್‌ ನಲ್ಲಿ ತುಂಡರಿಸಿದ ತಲೆಯನ್ನು ನೋಡಿ ಎಲ್ಲರೂ ಬೆಚ್ಚಿಬಿದ್ದರು.
ಇದಾದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪತ್ನಿಯನ್ನು ಏಕೆ ಕೊಂದಿದ್ದೀರಿ ಎಂದು ಪ್ರಶ್ನಿಸಿದಾಗ ಆಕೆಗೆ ಬೇರೊಬ್ಬ ವ್ಯಕ್ತಿಯ ಜತೆ ಅಕ್ರಮ ಸಂಬಂಧವಿತ್ತು ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.