ಜೂ.4ರ ನಂತರ ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಸರ್ಕಾರ ಮಾಯವಾಗಲಿದೆ : ಮೋದಿ
ವಿಜಯವಾಡ,ಮೇ9-ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಮಾಫಿಯಾರಾಜ್‌ನಿಂದ ಆಂಧ್ರಪ್ರದೇಶದ ಜನತೆ ಬೇಸತ್ತಿದ್ದಾರೆ. ಇದರಿಂದ ಜೂನ್‌ 4ರ ನಂತರ ವೈಎಸ್‌ಆರ್‌ಸಿಪಿ ಸರ್ಕಾರ ಮಾಯವಾಗಲಿದೆ ಎಂದು ಪ್ರಧಾನಿ ನರೇಂದ್ರಮೋದಿ ವಾಗ್ದಾಳಿ ನಡೆಸಿದ್ದಾರೆ.
ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳು ಮತ್ತು 175 ವಿಧಾನಸಭಾ ಕ್ಷೇತ್ರಗಳಿಗೆ ಮೇ 13ರಂದು ಏಕಕಾಲಕ್ಕೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಜಯವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ, ಟಿಡಿಪಿ ಅಧ್ಯಕ್ಷ ಎನ್‌.ಚಂದ್ರಬಾಬು ನಾಯ್ಡು, ಜನಸೇನಾ ಮುಖ್ಯಸ್ಥ, ನಟ ಪವನ್‌ ಕಲ್ಯಾಣ್‌ ಅವರೊಂದಿಗೆ ರೋಡ್‌ ಶೋ ನಡೆಸಿದ್ದಾರೆ.
ರೋಡ್‌ ಶೋ ಬಳಿಕ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಸಿಎಂ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರದ ಆಡಳಿತದ ಬಗ್ಗೆ ಟೀಕಿಸಿದ್ದಾರೆ.
ಕಾಂಗ್ರೆಸ್‌ ಸಂಸ್ಕೃತಿಯೊಂದಿಗೆ ಗಟ್ಟಿಯಾದ ನಂಟಿನಿಂದಾಗಿ ವೈಎಸ್‌ಆರ್‌ಸಿಪಿಯು ಭ್ರಷ್ಟಾಚಾರ, ಕುತಂತ್ರ ಮತ್ತು ಮಾಫಿಯಾ ರಾಜ್‌ ಹೆಚ್ಚಿಸಿದೆ. ಆಂಧ್ರಪ್ರದೇಶವು ವೈಎಸ್‌ಆರ್‌ಸಿಪಿಯಿಂದ ಸಂಪೂರ್ಣವಾಗಿ ಬೇಸತ್ತಿದೆ. ಜೂನ್‌ 4ರಂದು ಈ ಸರ್ಕಾರವು ಕಳೆದುಹೋಗಲಿದೆ. ಅಲ್ಲದೇ, ಇತ್ತೀಚಿಗೆ ರಾಜ್ಯದಾದ್ಯಂತ ಪ್ರವಾಸ ಮಾಡಿದ ನಂತರ ಜನರು ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಎನ್‌ಡಿಎ ಮೈತ್ರಿಕೂಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕುತ್ತಿದ್ದಾರೆ ಎಂದು ನನಗೆ ಮನವರಿಕೆಯಾಗಿದೆ ಎಂದಿದ್ದಾರೆ.
ಬಿಜೆಪಿ ಮತ್ತು ಟಿಡಿಪಿ ಈ ಹಿಂದೆ ಒಟ್ಟಿಗೆ ಕೆಲಸ ಮಾಡಿದೆ. ನಮ್ಮ ಮೈತ್ರಿ ಭವಿಷ್ಯದ ಅಭಿವೃದ್ಧಿಗೆ ಬದ್ಧವಾಗಿದೆ. ಈಗ ಜನಸೇನೆಯ ಸಕ್ರಿಯ ಬೆಂಬಲವು ನಮ್ಮ ಒಕ್ಕೂಟವನ್ನು ಮತ್ತಷ್ಟು ಬಲಪಡಿಸಿದೆ. ಆಂಧ್ರಪ್ರದೇಶದ ಜನರ ಆಕಾಂಕ್ಷೆಗಳನ್ನು ಈಡೇರಿಸುವ ಸಾಮರ್ಥ್ಯವನ್ನು ಎನ್‌ಡಿಎ ಮೈತ್ರಿಕೂಟ ಹೊಂದಿದೆ.
ನಾವು ಕೃಷಿ ಉತ್ಪಾದಕತೆಯನ್ನು ಸುಧಾರಿಸಲು, ಕೈಗಾರಿಕಾ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಆಂಧ್ರಪ್ರದೇಶದ ಸೇವಾ ವಲಯದಲ್ಲಿಯೂ ಛಾಪು ಮೂಡಿಸುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಈ ರಾಜ್ಯದ ಜನರು ಆಶೀರ್ವದಿಸಿರುವ ಉದ್ಯಮಶೀಲ ಶಕ್ತಿಗೆ ರೆಕ್ಕೆಗಳನ್ನು ಒದಗಿಸಲು ನಾವು ಸಿದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.
ಪ್ರಗತಿಗಾಗಿ ಆಂಧ್ರಪ್ರದೇಶದ ಕರಾವಳಿಯನ್ನು ಎನ್‌ಡಿಎ ಮೈತ್ರಿಕೂಟ ಸದುಪಯೋಗಪಡಿಸಿಕೊಳ್ಳುತ್ತದೆ. ರಾಜ್ಯದ ಬಂದರು ಪ್ರದೇಶವು ಅಭಿವೃದ್ಧಿ ಕೆಲಸಕ್ಕೆ ನೇತೃತ್ವ ವಹಿಸುತ್ತದೆ ಮತ್ತು ಮೀನುಗಾರಿಕೆ ಕ್ಷೇತ್ರವನ್ನು ಉತ್ತೇಜಿಸುತ್ತದೆ. ಜೊತೆಗೆ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗುವುದು. ರಸ್ತೆ, ರೈಲು ಮತ್ತು ವಿಮಾನ ಸಂಪರ್ಕ, ಡಿಜಿಟಲ್‌ ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗಿದೆ ಎಂದು ಅವರು ವಿವರಿಸಿದ್ದಾರೆ.