ಮಂಗಳಮುಖಿಯ ಕಿರುಕುಳದಿಂದ ನೊಂದ ಬಾಲಕ ಆತ್ಮಹತ್ಯೆ
ಮೈಸೂರು, ಜೂ.25– ಮಂಗಳಮುಖಿಯ ಕಿರುಕುಳದಿಂದ ನೊಂದ ಅಪ್ರಾಪ್ತ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ. ರಾಹುಲ್‌ ಮೌರ್ಯ (17) ಮೃತಪಟ್ಟ ಬಾಲಕ.
ಹುಣಸೂರಿನ ಕಿರಾಜಾಜಿ ಸರ್ಕಲ್‌ ಬಳಿ ಎಳೆನೀರು ವ್ಯಾಪಾರ ಮಾಡುತ್ತಿದ್ದ ರಾಹುಲ್‌ ಮೌರ್ಯಗೆ ಮಂಗಳಮುಖಿ ಜೊತೆ ಸ್ನೇಹವಾಗಿತ್ತು. ಆಗಾಗ ಮೊಬೈಲ್‌ ನಲ್ಲಿ ಮಾತನಾಡುತ್ತಿದ್ದ ರಾಹುಲ್‌ ಮೌರ್ಯ ಕಳೆದ ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದನು. ಈ ನಡುವೆ ತಾಯಿ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದ. ಆದರೆ ತಾನು ಇರುವ ಜಾಗ ತಿಳಿಸಿರಲಿಲ್ಲ.
ಜೂ.21ರಂದು ರಾಹುಲ್‌ ಮೌರ್ಯ ಊರಿಗೆ ಹಿಂದುರುಗಿದ್ದನು. ಈ ಮಧ್ಯೆ ಮಂಗಳಮುಖಿಯರು ಈತನ ಮನೆಗೆ ಬಂದು, ನಮ್ಮ ಹುಡುಗಿಯೊಬ್ಬಳನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಜಗಳವಾಡಿದ್ದಾರೆ. ಇದರಿಂದ ನೊಂದ ರಾಹುಲ್‌ ಮೌರ್ಯ ಸಾವಿಗೆ ಶರಣಾಗಿದ್ದಾನೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.