ರಾಜಾರೋಷವಾಗಿ ರಾಜೀನಾಮೆ ನೀಡಿ : ಜಗ್ಗೇಶ್‌
ಬೆಂಗಳೂರು,ಸೆ.26- ಸಿಎಂ ಸಿದ್ದರಾಮಯ್ಯ ಬಹಳ ಕ್ಲೀನ್‌ ನಾಯಕ ಅಂದುಕೊಂಡಿದ್ದೆ. 40 ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇರಲಿಲ್ಲ. ಈಗ ಇಡೀ ಬಟ್ಟೆ ಕಪ್ಪು ಇಂಕ್‌ನಲ್ಲಿ ತುಂಬಿ ಹೋಗಿದೆ. ದೊಡ್ಡ ಮನಸು ಮಾಡಿ ರಾಜಾರೋಷವಾಗಿ ರಾಜೀನಾಮೆ ಕೊಡಿ ಎಂದು ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಮಾಡಿದ್ದು ತಪ್ಪು ಎಂದು ನ್ಯಾಯಾಲಯ ಕೂಡ ಹೇಳಿದೆ. ಆದರೂ ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. ಮುಡಾ ಹಗರಣ ಮೂಲಕ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಸಿದ್ದರಾಮಯ್ಯ ಘನವಾದ ಹೆಸರು ತಂದುಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿಗೆ ತಾವು ಹಿಡಿದಿದ್ದ ಸಂವಿಧಾನ ಪುಸ್ತಕದಲ್ಲಿಎಷ್ಟು ಪುಟ ಇದೆ ಎಂದು ಹೇಳಲು ಆಗಲಿಲ್ಲ. ಅಂತಹವರನ್ನು ಪ್ರಧಾನಿ ಮಾಡಲು ಹೊರಟಿದ್ದಾರೆ. ಅಂತಹ ನಾಯಕನ ಕೆಳಗೆ ಇರುವ ಸಿದ್ದರಾಮಯ್ಯ ಘನವಾದ ಕೆಲಸ ಮಾಡಿದ್ದಾರೆ. ರಾಜ್ಯದ ಮಾನ ಮರ್ಯಾದೆ ಈಗಾಗಲೆ ಹರಾಜಾಗಿದೆ. ರಾಜೀನಾಮೆ ಕೊಡಿ, ನಿರ್ದೋಷಿಯಾಗಿ ಹೊರಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.