ಹಂತಹಂತವಾಗಿ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ : ಬೋಸರಾಜು
ಬೆಂಗಳೂರು,ಜು.18-ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ವಿಧಾನಪರಿಷತ್‌ ಸಭಾನಾಯಕ ಬೋಸರಾಜು ಹೇಳಿದ್ದಾರೆ.ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡಿದ್ದರು.
ಸಿಎಂ ಪರವಾಗಿ ಉತ್ತರಿಸಿದ ಬೋಸರಾಜು, ಸರ್ಕಾರ ಹಂತಹಂತವಾಗಿ ಆರ್ಥಿಕ ಇಲಾಖೆ ಒಪ್ಪಿಗೆ ಪಡೆದು ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಏಕಕಾಲದಲ್ಲಿ ಎಲ್ಲಾ ಹುದ್ದೆಗಳನ್ನೂ ಭರ್ತಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌‍ಸಿ)ದ ಮೂಲಕ ಕಾಲಕಾಲಕ್ಕೆ ಆರ್ಥಿಕ ಇತಿಮಿತಿಯೊಳಗೆ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಹುದ್ದೆ ತುಂಬುವಾಗ ಪಾರದರ್ಶಕತೆಯನ್ನು ಅಳವಡಿಸಿಕೊಳ್ಳಲಾಗುತ್ತದೆ. ಎಲ್ಲಿಯೂ ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿ.ಟಿ.ರವಿ, ಹಿಂದೆ ಕೆಪಿಎಸ್‌‍ಸಿಯಲ್ಲಿ ಇಂತಹ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳು ಪಡೆದುಕೊಂಡರೆ ಅಂತವರಿಗೆ ತಾಳಿ ಭಾಗ್ಯ, ಶಾದಿ ಭಾಗ್ಯ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಈಗಲೂ ಅದು ಇದೆಯೇ ಎಂದು ಪ್ರಶ್ನಿಸಿದರು.
ಕೆಪಿಎಸ್‌‍ಸಿಯಲ್ಲಿ ಅಧ್ಯಕ್ಷರು, ಸದಸ್ಯರ ನೇಮಕಾತಿಯಿಂದ ಹಿಡಿದು ಹುದ್ದೆಯನ್ನು ಪಡೆಯಬೇಕಾದರೂ ಜಾತಿ ಪ್ರಭಾವ, ಲಂಚದ ಆಮಿಷ ಯಥೇಚ್ಛವಾಗಿ ನಡೆಯುತ್ತದೆ. ಇದನ್ನು ಕೊನೆಗಾಣಿಸಬೇಕೆಂದು ಮನವಿ ಮಾಡಿದರು.ಕೆಪಿಎಸ್‌‍ಸಿಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ. ಸರ್ಕಾರ ಇದನ್ನು ವೆಬ್‌ಸೈಟ್‌ನಲ್ಲಿ ಏಕೆ ಹಾಕುವುದಿಲ್ಲ ಎಂದು ಪ್ರಶ್ನೆ ಮಾಡಿದರು.